ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಬುಧವಾರ, ಮೇ 14, 2008

ಬಾಬ್ರಿ ಮಸೀದಿಯ ದಂಗೆಗಳು ನಡೆದಾಗ ನಾನು ನಾಲ್ಕನೆಯ ಇಯತ್ತೆಯಲ್ಲಿ ಓದುತ್ತಿದ್ದೆ. ಅಕ್ಟೋಬರ್ ನ ದಸರಾ ರಜೆಯ ಸಮಯ. ಎಲ್ಲರೂ ಇಂದು ರಾತ್ರಿ ಹಿಂದೂ ಮುಸ್ಲಿಂ ಗಲಾಟೆ ಎಂದು ಮಾತಾಡಿ ಕೊಳ್ಳುತಿದ್ದರು. ಎಲ್ಲರೂ ಅಂದುಕೊಂಡಂತೆ ಅಂದು ರಾತ್ರಿ ಗಲಾಟೆ ಶುರು ಆಗಿಯೇ ಹೋಯಿತು. ಮರುದಿನ ಬೆಳಿಗ್ಗೆ ಹಾಲು ತರಲು ಹೋದ ಪಕ್ಕದ ಮನೆಯ ಮೇಸ್ಟ್ರು ಪೊಲೀಸರ ಬೆತ್ತದ ರುಚಿ ಕಂಡು ಬಂದಿದ್ದರು. ಮೇಷ್ಟ್ರಿಗೆ ಪೋಲೀಸರು ಹೊಡೆದರಂತೆ ಎಂದು ಎಲ್ಲರು ಮಾತಾಡಿ ಕೊಳ್ಳುತ್ತಿದ್ದರು. ಆಗೆಲ್ಲ ಪತ್ರಿಕೆಗಳಲ್ಲಿ ಟಿವಿಗಳಲ್ಲಿ ಅಡ್ವಾಣಿ ಮಿಂಚುತ್ತಿದ್ದರು. ರಾಮಜನ್ಮ ಭೂಮಿ ಎಂಬ ಮಂತ್ರ ತಾರಕಕ್ಕೆರಿತ್ತು . ಎಲ್ಲೆಲ್ಲೂ ಅಯೋಧ್ಯೆಯದೆ ಮಾತು. ನನಗೆ ಈ ಗಲಾಟೆಯ ಹಿಂದಿನ ಐತಿಹಾಸಿಕ ಕಾರಣಗಳಾಗಲಿ , ರಾಜಕೀಯ ಕಾರಣಗಳಾಗಲಿ ಗೊತ್ತಿರಲಿಲ್ಲ. ಯಾವನೋ ಒಬ್ಬ ರಾಮನ ಗುಡಿಯನ್ನು ಕೆಡವಿಸಿ ಅಲ್ಲಿ ಮಸಿದಿಯನ್ನು ಕಟ್ಟಿಸಿದನಂತೆ.....ಈಗ ಅದನ್ನು ಒಡೆದು ಮತ್ತೆ ರಾಮ ಮಂದಿರವನ್ನು ಕಟ್ಟುತ್ತಾರಂತೆ ಎಂದು ನನ್ನ ಜೊತೆಯ ಹುಡುಗನೊಬ್ಬ ಕ್ವಚಿತ್ತಾಗಿ ಹೇಳಿದ್ದ. ರಾಮ ಮಂದಿರವನ್ನು ಕೆಡವಿ ಮಸೀದಿಯನ್ನು ಕಟ್ಟಿದವನ ದುಸ್ಸಾಹಸದ ಬಗ್ಗೆ ನನಗೆ ಅಸಾಧ್ಯ ಸಿಟ್ಟು ಬಂದಿತ್ತು. ಆದರೆ ಮಸೀದಿಯನ್ನು ಕಟ್ಟಿದ್ದು ೧೫ ನೆಯ ಶತಮಾನದಲ್ಲಿ ಎಂದು ತಿಳಿದಾಗ ರಾಮಮಂದಿರವನ್ನು ಕಟ್ಟುವವರ ಬಗ್ಗೆಯೇ ಜಿಗುಪ್ಸೆ ಬಂದಿತ್ತು. ಮನೆಯಲ್ಲೇ ಬಂಧಿಯಾಗಿರಬೇಕು, ಹೊರಗೆ ಆಡಲು ಹೋಗುವ ಹೋಗುವ ಹಾಗೂ ಇಲ್ಲ , ಶಾಲೆಗೆ ಹೋಗುವ ಹಾಗೂ ಇಲ್ಲ. (ನಾನು ಆಗ ಶಾಲೆಯನ್ನು ಪ್ರೀತಿಸುತ್ತಿದ್ದೆ !!!) ಯಾವುದೋ ಕಾಲದ ಜಗಳವನ್ನು ಕಾಲು ಕೆದರಿ ಮತ್ತೆ ತೆಗೆಯುವ ಇದೆಂಥ ತರಲೆ ಈ ಅದ್ವಾನಿಯದು ಎಂದೆನಿಸಿತ್ತು

ಕಾಮೆಂಟ್‌ಗಳಿಲ್ಲ: