ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಬುಧವಾರ, ಮೇ 14, 2008

ಒಂದು ದಿನ ನನಗೆ ಚೆನ್ನಾಗಿ ನೆನಪಿದೆ. ಮನೆ ಮಹಡಿಯ ಮೇಲೆ ಹತ್ತಿ ನಾನು, ಗೆಳೆಯರು ಅಕ್ಕ ಪಕ್ಕದ ಮನೆಯ ಹಿರಿಯರೆಲ್ಲ ಮುಖ್ಯರಸ್ತೆಯ ಮೇಲೆ ಸಾಗಬೇಕಿದ್ದ ರಾಮನ ಮೆರವಣಿಗೆಯನ್ನು ನೋಡಲು ಕಾತುರರಾಗಿ ನಿಂತಿದ್ದೆವು. ವೈಭವದ ಮೆರವಣಿಗೆ ಹಾಗು ಜನಸಾಗರದ ನಡುವೆ ರಾಮನ ರಥ ತುಂಬುಗಾಂಭೀರ್ಯದಿಂದ ಸಾಗಿ ಬರುತ್ತಿತ್ತು. ಮನೆಯ ಸರಿಯಾಗಿ ಎದುರಿಗೆ ಬರುತ್ತಿದ್ದಂತೆ ಅದೇನಾಯಿತೋ ಇದ್ದಕ್ಕಿದ್ದಂತೆ ಬೊಂಬು, ಗಳಗಳನ್ನು ಹಿಡಿದ ಗುಂಪೊಂದು ಇದ್ದಕ್ಕಿದ್ದಂತೆ ಮುಸಲ್ಮಾನರ ಒಣಿಯತ್ತ ಓಡ ತೊಡಗಿತು. ಅದೇ ರೀತಿ ಇನ್ನೊಂದು ಗುಂಪು ಮೆರವಣಿಗೆಯ ಮೇಲೆ ಮುಗಿಬಿತ್ತು. ಎರಡು ಬಾರಿ ಎವೆಯಿಕ್ಕಿ ತೆರೆಯುವುದರೊಳಗೆ ಅನೇಕ ಜನ ಬೋರಲು ಬಿದ್ದಿದ್ದರು. ಕೆಲವರು ಬೃಹತ್ತಾದ ಚರಂಡಿಯೊಳಗೆ ಬಿದ್ದಿದ್ದರು. ಹಿಂದೂ ಮುಸ್ಲಿಂ ಗಲಾಟೆ ಎಂದರೆ ಎಂಥದೋ ಕೊಳಿಜಗಳ ಇರಬೇಕು ಎಂಬ ಕಲ್ಪನೆಯಲ್ಲಿದ್ದ ನಂಗೆ ಜಗಳದ ಈ ಭಯಾನಕ ರೂಪ ತೀವ್ರವಾಗಿ ದಿಗಿಲಿಕ್ಕಿಸಿ ಬಿಟ್ಟಿತ್ತು. ಎರಡು ದಿನ ರಸ್ತೆಗಳಲ್ಲಿ ಚರಂಡಿಗಳಲ್ಲಿ ಹೆಣವಾಗಿ ಬಿದ್ದಿದ್ದವರೇ ಯೋಚನೆಗಳಲ್ಲಿ ಬರುತ್ತಿದ್ದರು. ಅದೆಷ್ಟು ಹೊತ್ತು ಆ ಗಲಾಟೆ ನಡೆಯಿತೋ ! ತಿರುಗಿ ಹಲವು ದಿನ ನಮ್ಮ ಓಣಿಯಲ್ಲಿ ಯಾರು ಮನೆಯಿಂದ ಹೊರಬೀಳಲಿಲ್ಲ. ಕರ್ಫ್ಯೂ ಜಾರಿಯಾಗಿತ್ತು . ಬೀದಿಗಳಲ್ಲಿ ಪೊಲೀಸರ ಬೂಟಿನ ಸದ್ದು ಬಿಟ್ಟರೆ ನಾಯಿಗಳು ಬೊಗಳುವ ಸದ್ದು ಕೇಳುತ್ತಿತ್ತು. ಅಗಾಗೊಮ್ಮೆ ಜೀಪೊಂದರಲ್ಲಿ ಕಂಡಲ್ಲಿ ಗುಂಡು ಎಂದು ಕೂಗುತ್ತ ಪೋಲೀಸರು ಓಡಾಡುತ್ತಿದ್ದರು . ಬೆನ್ನಟ್ಟಿ ಬರುವ ನಾಯಿಗಳನ್ನು ಗದರಿಸುತ್ತಿದ್ದ ಪೋಲೀಸರು ಅಗಾಗ ಕೆಲವರ ಮನೆಯಲ್ಲಿ ನೀರನ್ನು ಕೇಳಿ ಪಡೆಯುತ್ತಿದ್ದರು. ಕಸ ಚೆಲ್ಲಲು ಇಲ್ಲವೇ ಕುತೂಹಲದಿಂದ ಹೊರಬರುತ್ತಿದ್ದ ಹೆಂಗಳೆಯರನ್ನು ಪೋಲೀಸರು ಗದರಿಸಿ ಒಳ ಕಳುಹಿಸುತ್ತಿದ್ದರು. ಕರ್ಫ್ಯೂ ದಿನಗಳಲ್ಲಿ ತರಕಾರಿ ಹಾಗಿರಲಿ ಕುಡಿಯಲು ನೀರನ್ನೂ ಚೌಕಾಸಿ ಮಾಡಿ ಬಳಸಬೇಕಾಗುತ್ತಿತ್ತು.

ಕಾಮೆಂಟ್‌ಗಳಿಲ್ಲ: