ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಶುಕ್ರವಾರ, ಜುಲೈ 24, 2009

ಮಿನಿ ಮಿನಿ ಕಥೆಗಳು....!!!!

ಎಲ್ಲಿದೆ ಸೌಂದರ್ಯ?

ಛೆ! ಎಂಥ ಕುರೂಪಿ ಹುಡುಗಿ ಇವಳು! ಹಲ್ಲುಬ್ಬು. ಅಲ್ಲಿನ ಮೇಲೆಲ್ಲ ಹಳದಿ ಕಲೆಗಳು. ಎಣ್ಣೆಗೆಂಪು ಬಣ್ಣ. ಮೋಟುಜಡೆ. ಹಲ್ಲಿನ ನಡುವೆ ಬಸ್ಸು ಹೋಗುವಷ್ಟು ಅಗಲ ಕಿಂಡಿಗಳು. ಯಾವ ಮೂಡಿನಲ್ಲಿದ್ದನೋ ಪರಮಾತ್ಮ ಇವಳನ್ನು ನಿರ್ಮಿಸುವಾಗ!
ಮದುವೆ ಮನೆ. ಅಸ್ತಮಾ ಪೀಡಿತ ನಾಯಿಯಂತೆ ಸದ್ದು ಹೊರಡಿಸುತ್ತಾ ಒಬ್ಬ ಜೋರಾಗಿ ತೇಕತೊಡಗಿದ. ಬಾಯಿಯಿಂದ ನೊರೆ ಉಕ್ಕತೊಡಗಿತು. ಅವನ ತಲೆ ಜೋರಾಗಿ ಮಧ್ಯಕ್ಕೂ ಬಲಕ್ಕೂ ತೊಯ್ದಾಡತೊಡಗಿತು. ನಮ್ಮ ಕುರೂಪಿ ಹುಡುಗಿ ಓಡಿ ಬಂದಳು. ಅವನು ಆಕೆಯ ಗಂಡ! ಯಾರೋ ಕೀಗೊಂಚಲು ಕೊಟ್ಟರು. ಕೀಗೊಂಚಲನ್ನು ಅವನ ಕೈಯಲ್ಲಿಟ್ಟು ಇನೊಂದು ಕೈಯಾಲ್ಲಿ ತೋಳನ್ನು ಬಿಗಿಯಾಗಿ ಹಿಡಿದು ಸಂತೈಸತೊಡಗಿದಳು. ಚಪ್ಪಲಿ ಬಿಚ್ಚಿ ತೆಗೆದು ಅಂಗಾಲನ್ನು ತಿಕ್ಕತೊಡಗಿದಳು. ಅವನು ನಿಧಾನವಾಗಿ ಚೇತರಿಸಿಕೊಳ್ಳತೊಡಗಿದ. ಪ್ರಜ್ಞೆ ಮರುಕಳಿಸಿದಂತೆ ಹುಚ್ಚು ಹಿಡಿದವನಂತೆ ಆಡತೊಡಗಿದ. ಚಪ್ಪಲಿ ತೆಗೆದಿದ್ದಕ್ಕೆ ಅವಳ ಮೇಲೆ ರೇಗಿದ. ಅವನು ದೂಕಿದ ಜೋರಿಗೆ ಆಕೆ ಎರಡು ಮಾರಾಚೆ ಹೋಗಿ ಬಿದ್ದಳು. ನಿಧಾನವಾಗಿ ಹಸನ್ಮುಖಿಯಾಗಿ ಎದ್ದು ಬಂದಳು. ಚಪ್ಪಲಿ ತೊಡಿಸಲು ಮುಂದಾದಳು. ಅವಳ ಕಪಾಳಕ್ಕೆ ಹೊಡೆದು ಝಾಡಿಸಿ ಸೊಂಟಕ್ಕೆ ಒದ್ದ. ಈ ಬಾರಿ ನಾಕು ಮಾರು ದೂರಕ್ಕೆ ಬಿದ್ದಳು. ಅವಳ ದೇಹ ಬಡಿದ ರಭಸಕ್ಕೆ ಕುರ್ಚಿಗಳು ಚೆದುರಿ ಹೋದವು. ಅವಳ ಮುಖದ ಮುಗುಳ್ನಗು ಮಾಯವಾಗಲಿಲ್ಲ. ಚಿಮ್ಮಿದ ಕಣ್ಣೀರನ್ನು ಅಲ್ಲೇ ಅದುಮಿ ತೊರುಬೆರಳಿಂದ ಒರೆಸಿಕೊಂಡು ಗಂಡನ ತೋಳು ಹಿಡಿದಳು. ನಗುಮುಖದಿಂದ ಸುತ್ತಲಿದ್ದವರಿಗೆ ಕ್ಷಮೆ ಕೇಳಿ ಕೋಣೆಯೆಡೆಗೆ ಗಂಡನನ್ನು ಕರೆದೊಯ್ದಳು.

ಇದ್ದಕ್ಕಿದ್ದಂತೆ ಆ ಹುಡುಗಿಯ ಮುಖದ ಮೇಲೆ ಸೌಂದರ್ಯ ನಳನಳಿಸತೊಡಗಿತು!

**************************************************************************************************************************************

ದೊಡ್ಡವರ ವಿಷಯ!

ಈ ಊರಿಗೆ ಹೊಸದಾಗಿ ಜಿಲ್ಲಾ ಮಟ್ಟದ ಗೆಝೆಟೆಡ್ ಅಧಿಕಾರಿ ವರ್ಗವಾಗಿ ಬಂದರು. ಅವರ ಗತ್ತು, ಗಾಂಭೀರ್ಯ ಹೆಸರುವಾಸಿಯಾಗಿದ್ದವು. ಈ ಹೊಸ ಆಫ಼ೀಸಿನ ಜವಾನನಿಗೆ ಇಪ್ಪತ್ತೇಳೋ ಇಪ್ಪತೆಂಟೋ ವರ್ಷದ ಅನುಭವ. ಇಲಾಖೆಯ ರಾಜಕೀಯ, ಕಾರ್ಯವೈಖರಿ, ದಕ್ಷತೆ ಇತ್ಯಾದಿಗಳ ಬಗ್ಗೆ ಚೆನ್ನಾಗಿ ಅರಿತವ. ನುರಿತವ! ಅಗಾಗ ಅಧಿಕಾರಿಗಳಿಗೆ ಕೆಲ ಸೂಕ್ಷ್ಮಗಳನ್ನು ತಿಳಿಸಲು ಯತ್ನಿಸುತ್ತಿದ್ದ. ಅವರಿಗೆ ರೇಗುತ್ತಿತ್ತು. "ನಿನ್ನ ಕೆಲಸ ನೀನು ನೋಡು" ಎಂದು ಗದರುತ್ತಿದ್ದರು. "ದೊಡ್ಡವರ ವಿಷಯ ನಿಂಗ್ಯಾಕೆ?" ಎಂದು ಅಬ್ಬರಿಸುತ್ತಿದ್ದರು. ಅನುಭವಿ ಜವಾನ ದೊಡ್ಡವರ ವಿಷಯದಲ್ಲಿ ತಲೆ ಹಾಕದಿರುವುದನ್ನು ಬಹಳ ಬೇಗ ಕಲಿತುಕೊಂಡ.
ಅಧಿಕಾರಿಗಳ ಮಗಳ ಮದುವೆ ಆ ಊರಿನ ಪ್ರಸಿದ್ಧ ಪತ್ರಿಕೆಯ ಸಂಪಾದಕರೊಂದಿಗೆ ನಿಶ್ಚಯವಾಯಿತು. ಸಂತಸ ಸಂಭ್ರಮಗಳಿಂದ ಸಿದ್ಧತೆಗಳು ಜರುಗತೊಡಗಿದವು. ಮದುವೆ ಇನ್ನೊಂದು ವಾರವಿದೆ ಎನ್ನುವಾಗ ಹಾರ್ಟ್ ಬ್ರೇಕಿಂಗ್ ನ್ಯೂಸ್ ಬಂತು. ಹುಡುಗ ಮೊದಲೇ ಪ್ರ್‍ಏಮಿಸಿ ಒಬ್ಬ ಹುಡುಗಿಯನ್ನು ಮದುವೆಯಾಗಿದ್ದ. ಒಂದು ಮಗುವೂ ಇತ್ತು. ತಮಗೆ ಇಷ್ಟ ಇಲ್ಲದ ಸೊಸೆಗೆ ಬಲವಂತವಾಗಿ ಮಗನಿಂದ ಡೈವರ್ಸ್ ಕೊಡಿಸಿ ವಿಷಯ ಮುಚ್ಚಿಟ್ಟು ಮದುವೆ ಮಾಡಲು ಹೊರಟಿದ್ದರು. ಹುಡುಗನಿಗೆ ಈ ಮದುವೆ ಇಷ್ಟವೇ ಇರಲಿಲ್ಲ. ಮದುವೆ ಮುರಿಯಿತು.
ಖಿನ್ನರಾಗಿ ಅಫ಼ೀಸಿನ ಖುರ್ಚಿಯ ಮೇಲೆ ಕುಳಿತ ಅಧಿಕಾರಿ ಗೊಣಗಿದರು. "ಆ ಹುಡುಗನಿಗೆ ಮೊದಲೇ ಮದುವೆ ಆಗಿತ್ತಂತೆ! ಮೋಸ ಮಾಡಿಬಿಟ್ಟರು. ನಿಂಗೆ ಅವರ ಬಗ್ಗೆ ಗೊತ್ತಾ?" ಅಂತ ಜವಾನನನ್ನು ಕೇಳಿದರು.
"ಹೌದು ಸರ್! ಆ ಹುಡುಗಿ ನಮ್ಮೂರಿನವಳು. ಪಾಪಿಗಳು ದೂರ ಮಾಡಿಬಿಟ್ಟರು. ಅದೇ ಕೊರಗನ್ನು ಹಚ್ಚಿಕೊಂಡು ಅವನು ದಿನಾ ಕುಡೀತಾನೆ."
"ಹೌದಾ? ಎಲ್ಲಾ ವಿಷಯ ಗೊತ್ತಿದ್ದೂ ಮೊದಲೇ ಯಾಕೆ ಹೇಳಲಿಲ್ಲ?"
"ದೊಡ್ಡವರ ವಿಷಯ ನನಗ್ಯಾಕೆ ಅಂತ ಸುಮ್ಮನಿದ್ದೆ ಸರ್!" ಅಂದ ಜವಾನ ವಿನಯದಿಂದ!

*************************************************************************************************************************************

ನಾನೂ ಹೊಸಬ

"ಶ್ರೀ ಗುರುಬಸವೇಶ್ವರ ಕಲ್ಯಾಣ ಮಂಟಪ" ಎಂದು ಕಟ್ಟಡದ ಹಣೆಯ ಮೇಲೆ ದೊಡ್ಡದಾಗಿ ಬರೆದಿದ್ದ ಹೆಸರನ್ನು ಓದುತ್ತಿದ್ದೆ. ಪಕ್ಕದಲ್ಲಿ ಬಂದು ನಿಂತ ಧುಡೂತಿ ಹೆಂಗಸು "ಶ್ರೀ ಗುರುಬಸವೇಶ್ವರ ಕಲ್ಯಾಣ ಮಂಟಪ" ಎಂದು ಜೋರಾಗಿ ಓದಿದಳು. ಕಟ್ಟಡದ ಕಡೆ ಬೊಟ್ಟು ಮಾಡಿ ತೋರಿಸುತ್ತಾ ನನ್ನನ್ನುದ್ದೇಶಿಸಿ "ಹಲೋ,.. ಇದು ಕಲ್ಯಾಣ ಮಂಟಪಾನಾ?" ಅಂತ ಕೇಳಿದಳು.
"ಗೊತ್ತಿಲ್ಲ. ನಾನೂ ಈ ಊರಿಗೆ ಹೊಸಬ" ಎಂದು ಹೇಳಿ ಬೆನ್ನು ತಿರುಗಿಸಿ ನಡೆದೆ.

********************************************************************************************************************************

ಹೆತ್ತವರ್‍ಯಾರು?

ಅರ್ಜಿಯಲ್ಲಿ "ಹೆತ್ತವರ ಸಹಿ" ಎಂಬಲ್ಲಿ ಸಹಿ ಮಾಡಲು ಹೊರಟ ತಂದೆಯನ್ನು ತಡೆದ ಮುದ್ದಿನ ಮಗಳು
"ನನ್ನನ್ನು ಹೆತ್ತದ್ದು ಅಮ್ಮ. ನೀನೇಕೆ ಸಹಿಮಾಡುತ್ತೀಯಾ?" ಎಂದು ಕೇಳಿದಳು ಮುದ್ದಾದ ಪದಗಳಲ್ಲಿ.

**************************************************************************************************************************

ಕಾಸಿಗೆ ತಕ್ಕ ಕಜ್ಜಾಯ.

ಹುಡುಗಿಯನ್ನು ನೋಡಲು ಬಂದವರು ಸಣ್ಣಗೆ ಮೂಗು ಮುರಿದರು.
"ಹುಡುಗಿಯ ಕಣ್ಣು ಸಲ್ಪ ಮೆಳ್ಳೆ" ಎಂದಳು ತಾಯಿ.
"ಹುಡುಗಿಯ ಪಾದ ಫ಼್ಲಾಟು. ಒಳ್ಳೆದಾಗಲ್ಲ" ಎಂದರು ಪುರೋಹಿತರು.
"ದನಿ ಸಲ್ಪ ಗೊಗ್ಗರು" ಎಂದಳು ತಂಗಿ.
"ಹುಡುಗಿ ಅಣ್ಣ ರೌಡಿ ಥರ ಕಾಣ್ತಾನೆ" ಎಂದ ಹುಡುಗನ ಮಾವ.
ಒಂದೊಂದು ಲಕ್ಷಕ್ಕೊಂದರಂತೆ ಹುಡುಗಿಯ ಐಬುಗಳನ್ನು ಮುಚ್ಚಲಾಯಿತು. ಮದುವೆ ಸಾಂಗೊಪಸಾಂಗವಾಗಿ ನೆರವೇರಿತು.

******************************************************************************************************************

ದೀಪದ ಕೆಳಗೆ....

ಪಿ.ಟಿ ಮೇಷ್ಟ್ರು ಹುಡುಗರಿಗೆ ಬೈಯುತ್ತಿದ್ದರು. "ನಿಮ್ಮಲ್ಲಿ ಸಂಸ್ಕಾರ ಇಲ್ಲ ಕಣ್ರಯ್ಯ! ನಿಮ್ಮಪ್ಪ ಅಮ್ಮ ಏನು ಹೇಳಿಕೊಟ್ಟಿದ್ದಾರೆ ನಿಮಗೆ. ಮಾತು ಮಾತಿಗೆ ’ಲೇ’ ಅಂತೀರಾ. ’ಹೋಗ್ರಲೇ... ಬರ್ರಲೇ’ ಛೆ! ಕೇಳಲಿಕ್ಕೇ ಎಂಥ ಅಸಹ್ಯ!"
ಅದೇ ಸಂಜೆ ಐದೋ ಆರು ವರ್ಷದ ಹುಡುಗನೊಬ್ಬ ತನಗಿಂತ ಎತ್ತರದ ಬ್ಯಾಟನ್ನು ಹಿಡಿದು ಕ್ರಿಕೆಟ್ ಆಡುತ್ತಿದ್ದ. ಬಾಲೆಸೆಯುವ ಹುಡುಗ ನಿಧಾನವಾಗಿ ಚೆಂಡನ್ನು ಎಸೆಯುತ್ತಿದ್ದ. ಎತ್ತರದ ಬ್ಯಾಟನ್ನು ಎತ್ತಿ ಹೊಡೆಯಲಾಗದೇ ಹುಡುಗ ಸೋಲುತ್ತಿದ್ದ. ಚೆಂಡೆಸೆಯುವನನ್ನು ಹಿಗ್ಗಾಮುಗ್ಗಾ ಬೈಯುತ್ತಿದ್ದ. "ಲೇ..ಲೇ ಹಲ್ಕಟ್... ನೆಟ್ಟಗೆ ಬಾಲ್ ಹಾಕೊಕಾಗಲ್ವೇನಲೇ ....ಸುವ್ವರ್.."
ಅಲ್ಲಿಗೆ ಪಿ.ಟಿ. ಮೇಷ್ಟ್ರು ಬಂದರು. ಕೈಲಿದ್ದ ಬ್ಯಾಟನ್ನು ಎಸೆದ ಹುಡುಗ "ಅಪ್ಪಾ" ಎಂದು ಓಡಿ ಹೋಗಿ ಮೇಷ್ಟ್ರ ಮಡಿಲನ್ನೇರಿದ. ಮಗನನ್ನೆತ್ತಿಕೊಂಡ ಮೇಷ್ಟ್ರು ಕೆನ್ನೆಗೆ ಹಣೆಗೆ ಲೊಚಲೊಚನೆ ಮುತ್ತಿಟ್ಟರು!

***********************************************************************************************************************************

ಮದುವೆ ಸ್ವರ್ಗದಲ್ಲಿ...

"ಮದುವೆ ಸ್ವರ್ಗದಲ್ಲಿ ಫ಼ಿಕ್ಸ್ ಆಗುತ್ತಂತೆ" ಎಂದಳು ಹೆಂಡತಿ.
"ಹೌದು, ಆದರೆ ನಂತರದ ಬದುಕು ನಡೆಯೋದು ಮಾತ್ರ ನರಕದಲ್ಲಿ" ಎಂದ ಗಂಡ.

********************************************************************************************************************

ಶತ್ರು ಹಿಂಜರಿದಾಗ.

ಬೆನ್ನಟ್ಟಿ ಬಂದ ಹುಲಿಯನ್ನು ಗುರುಗುಟ್ಟಿ ನೋಡಿತು ಜಿಂಕೆ.
ಹುಲಿ ಎರಡು ಹೆಜ್ಜೆ ಹಿಂದೆ ಸರಿಯಿತು. ತನಗೆ ಹೆದರಿಕೊಂಡು ಹಿಂದೆ ಸರಿದ ಹುಲಿಯ ಕಂಡು ಬೀಗಿತು ಜಿಂಕೆ ಮನದೊಳಗೆ.
ಮರುಕ್ಷಣದಲ್ಲಿಯೇ ಜಿಂಕೆಯ ಕತ್ತು ಹಿಡಿದು ಕೊಂದು ಹಾಕಿತು ಹುಲಿ.
ಮರೆಯಿಂದ ನೋಡುತ್ತಿದ್ದ ಹಿರಿಯ ಜಿಂಕೆ ಉಸುರಿತು. "ಹೆಚ್ಚಿನ ವೇಗ ಪಡೆಯಲು ಹುಲಿ ಹಿಂದೆ ಸರಿಯುತ್ತದೆ ಅಂತ ಆ ಜಂಬಗಾರನಿಗೆ ಗೊತ್ತೇ ಆಗಲಿಲ್ಲ."