ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಗುರುವಾರ, ಡಿಸೆಂಬರ್ 17, 2009

ನಮ್ಮವರ ಸಿಕ್ಸ್ ಸಿಗ್ಮಾ ದಕ್ಷತೆ.



(ಈ ಲೇಖನವನ್ನು ಬರೆಯಲು ಗೆಳೆಯ ಲೋಹಿತ್ ಬೆಳೆಸಿದ "ಲೋಹಿತಂತ್ರಾಂಶ" ಬಳಸಿದ್ದೇನೆ)

ವಿದ್ಯಾರ್ಥಿ ಭವನದಲ್ಲಿ ದೋಸೆ ತಿನ್ನುವ ಕಾರ್ಯಕ್ರಮ. ಒಬ್ಪೊಬ್ಪರದು ಒಂದೊಂದು ಬೇಡಿಕೆ. ನಾನು ವಡೆ ತಿನ್ನುವುದಿಲ್ಲ, ಇನ್ನೊಬ್ಬರಿಗೆ ಕೇಸರಿ ಬಾತ್ ಆಗದು, ನಾಲ್ಕು ದೋಸೆ, ಮೂರು ವಡೆ, ಎರಡು ಕೇಸರಿ ಬಾತ್. ಈ ರೀತಿ ಪ್ರತೀ ಮೇಜಿನಲ್ಲೂ ಬೇರೆ ಬೇರೆ ಬೇಡಿಕೆಗಳು. ಬೇರೆ ಮೇಜಿನ ಬೇಡಿಕೆಗಳನ್ನು ಕೇಳಿ ಬರುತ್ತಿದ್ದಂತೆ. ನಮ್ಮ ಮೆನು ಬದಲಾಗಿರುತ್ತದೆ! ವಡೆ ಮೂರರ ಬದಲು ಎರಡು ಕೊಡಿ, ಕೇಸರಿ ಬಾತ್ ಮೂರು ಇರಲಿ. ಯಾವ ಯಾವ ಮೇಜಿನಿಂದ ಯಾರು ಯಾವುದನ್ನು ಆರ್ಡರ್ ಮಾಡಿದ್ದಾರೆ, ಎಷ್ಟು ಆರ್ಡರ್ ಮಾಡಿದ್ದಾರೆ, ಮತ್ತೆ ಎಲ್ಲೆಲ್ಲಿ ಬದಲಾವಣೆ ಮಾಡಿದ್ದಾರೆ ಎಲ್ಲವನ್ನೂ ನೆನಪಿಟ್ಟುಕೊಂಡು ಹೋಟೆಲ್ 'ತಮ್ಮ' ತಂದು ಕೊಡಬೇಕು. ಅಲ್ಲದೇ ಸರಿಯಾಗಿ ಅದಕ್ಕೆ ತಕ್ಕಂತೆ ಬಿಲ್ ಮಾಡಬೇಕು! ಬಿಲ್ಲಿನಲ್ಲಿ ಕೊಂಚ ಏರುಪೇರಾದರೂ ಮಾಲಿಕನ ಬಳಿ ಇಲ್ಲವೇ ಗಿರಾಕಿಯ ಬಳಿ ಬೈಸಿಕೊಳ್ಳಬೇಕು. ಆದರೆ ಈ ಹುಡುಗರು ಸರಿಯಾಗಿ ತಂದು ಕೊಡುತ್ತಾರೆ, ಸರಿಯಾಗಿ ಬಿಲ್ಲಿಂಗ್ ಮಾಡುತ್ತಾರೆ. ತಪ್ಪುವುದು ತೀರಾ ಕಮ್ಮಿ! ಹತ್ತನೆಯ ತರಗತಿಯನ್ನೂ ಪಾಸು ಮಾಡಲಾಗದ ಆ ಹುಡುಗರು ಅಷ್ಟು ನಿಖರವಾಗಿ ಹೇಗೆ ಕೆಲಸ ಮಾಡುತ್ತಾರೆ? ಎಲ್ಲವನ್ನೂ ಹೇಗೆ ನೆನಪಿಟ್ಟುಕೊಳ್ಳುತ್ತಾರೆ?
ಬಟ್ಟೆ ಇಸ್ತ್ರಿ ಮಾಡುವವನು ಅಥವಾ ತೊಳೆಯುವವನ ಉದಾಹರಣೆ ಎಲ್ಲರಿಗೂ ಚಿರಪರಿಚಿತ. ಯಾರ ಮನೆಯಿಂದ ಯಾರ ಬಟ್ಟೆ, ಯಾರು ಎಷ್ಟು ಕೊಟ್ಟಿದ್ದಾರೆ, ಯಾವಾಗ ವಾಪಸು ಕೊಡಬೇಕು ಎಲ್ಲವನ್ನೂ ಆ ಗಮಾರ(?) ನೆನಪಿಟ್ಟುಕೊಂಡು ತಂದು ಕೊಡುತ್ತಾನಲ್ಲ. ಅನೇಕ ಅಗಸರು ತಿಂಗಳ ಕಡೆಯಲ್ಲಿ ಅಥವಾ ವಾರದ ಕಡೆಯಲ್ಲಿ ಹಣ ಪಡೆಯುತ್ತಾರೆ. ಆಗಲೂ ಅವರಿಗೆ ವಾರ ಪೂರ್ತಿಯ ಯಾರ ಯಾರ ಮನೆಯ ಎಷ್ಟೆಷ್ಟು ಬಟ್ಟೆ, ಒಬ್ಬೊಬ್ಬರದು ಎಷ್ಟೆಷ್ಟು ಬಾಕಿ ಹಣ ಎಲ್ಲವನ್ನೂ ನೆನಪಿಟ್ಟುಕೊಂಡಿರುತ್ತಾರೆ. ಕಿಂಚಿತ್ ತಪ್ಪೂ ಆಗುವುದಿಲ್ಲ. ಒಂದು ಬಾರಿಯೂ ಒಬ್ಬರ ಮನೆಯ ಬಟ್ಟೇ ಇನ್ನೊಬ್ಬರ ಮನೆಗೆ ಹೋಗುವುದಿಲ್ಲ! ಯಾವ ವ್ಯವಸ್ಥೆ ಇವರನ್ನು ಇಷ್ಟು "ಅಕ್ಯುರೇಟ್" ಆಗಿಸುತ್ತದೆ?
ಪೇಪರ್ ಹಾಕುವ ಹುಡುಗ. ನೂರಾರು ಇಂಗ್ಲಿಶ್, ಕನ್ನಡ ಪತ್ರಿಕೆಗಳ ನಡುವೆ ಯಾವುದು ಯಾರ ಮನೆಗೆ ಹೋಗಬೇಕು ಎಂದು ನೆನಪಿಟ್ಟುಕೊಳ್ಳುತ್ತಾನೆ. ಕೆಲ ತಿಕ್ಕಲು ಓದುಗರು ಹೇಗಿರುತ್ತಾರೆ ಎಂದರೆ ಭಾನುವಾರ ಪ್ರಜಾವಾಣಿ ಮಾತ್ರ ಹಾಕು, ಬುಧವಾರ ವಿತ್ತಪ್ರಭ ಮಾತ್ರ ಹಾಕು, ಟೈಮ್ಸ್ ಆಫ್ ಇಂಡಿಯಾ ಶುಕ್ರವಾರ ಮಾತ್ರ ಸಾಕು ಎಂದೆಲ್ಲಾ ಕಂಡಿಶನ್ನುಗಳನ್ನು ಇಟ್ಟಿರುತ್ತಾರೆ. ಇದನ್ನೆಲ್ಲ ಪ್ರತಿಯೊಂದು ಮನೆಯ ಮಟ್ಟಿಗೂ ನೆನಪಿಡಬೇಕು. ಸರಿಯಾಗಿ ಆಯಾ ಪತ್ರಿಕೆಯನ್ನು ಬೆಳಗಿನ ಚಹಾ ಸಮಯದೊಳಗೆ ತಲುಪಿಸಬೇಕು. ಇಲ್ಲದಿದ್ದರೆ ಬೈಗುಳ ಗ್ಯಾರಂಟಿ! ಸಾಲದೆಂಬಂತೆ ಈ ತಿಂಗಳಲ್ಲಿ ಯಾವ ಪತ್ರಿಕೆಯದು ಎಷ್ಟು ರಜೆಗಳು ಬಂದಿವೆ, ಯಾವ ದಿನ ಗಿರಾಕಿಗಳು ಊರಿಗೆ ಹೋಗಿದ್ದರಿಂದ ಪೇಪರ್ ಹಾಕಲಾಗಿಲ್ಲ ಎಂದು ನೆನಪಿಟ್ಟು ಬಿಲ್ಲಿಂಗ್ ಮಾಡಬೇಕು. ಪೇಪರ್ ಹಾಕುವ ಹುಡುಗನ ಕೆಲಸ ಎಂದರೆ ಸಾಮಾನ್ಯ ವಿಷಯವೇ?
ಮುಂಬಯಿ ಡಬ್ಬಾವಾಲಾಗಳ ಕೆಲಸದ ನಿಖರತೆಗೆ ದೇಶವಿದೇಶದ ಮ್ಯಾನೇಜ್ ಮೆಂಟ್ ಕಾಲೇಜುಗಳು ಮಾರು ಹೋಗಿವೆ. ರಾಜಕುಮಾರ ಚಾರ್ಲ್ಸ್ ಸ್ವತಃ ಬಂದು ಅಭಿನಂದಿಸಿದ್ದಾನೆ! ಮುಂಬಯಿ ಡಬ್ಬಾವಾಲಾಗಳ ಬಳಿ ಊಟದ ಡಬ್ಬಿ ಬದಲಾಗುವುದು ಕೋಟಿಗೊಮ್ಮೆ ಮಾತ್ರ! ಡಬ್ಬಾವಾಲಾಗಳು ಯಾವುದೇ ಮ್ಯಾನೇಜ್ ಮೆಂಟ್ ಕೋರ್ಸ್ ಮಾಡಿದವರಲ್ಲ, ಹೋಗಲಿ ಯಾವ ಡಿಗ್ರಿಯನ್ನೂ ಪಡೆದವರಲ್ಲ!


ಸಿಕ್ಸ್ ಸಿಗ್ಮಾ ಎಂಬ ಪದವಿದೆ. ತಾಂತ್ರಿಕ ಮತ್ತು ಮ್ಯಾನೇಜ್ ಮೆಂಟ್ ಕ್ಷೇತ್ರದಲ್ಲಿರುವವರಿಗೆ ಇದು ಪರಿಚಿತ ಹೆಸರು. ಇದು ಸೇವಾ ಕ್ಷೇತ್ರದಲ್ಲಿನ ದಕ್ಷತೆಯ ಅಳತೆಗೋಲು. ಸಿಕ್ಸ್ ಸಿಗ್ಮಾ ಎಂದರೆ ಸೇವೆ ನೀಡುವ ಹತ್ತು ಲಕ್ಷ (ಒಂದು ಮಿಲಿಯನ್) ಯುನಿಟ್ ಗಳಲ್ಲಿ ಒಂದು ಬಾರಿ ಮಾತ್ರ ದೋಷ ಬರಬಹುದು! ಅಂದರೆ ನೀವು ವಾಚಿನ ತಯಾರಕರಾಗಿದ್ದರೆ ಹತ್ತು ಲಕ್ಷ ವಾಚುಗಳ ಪೈಕಿ ಒಂದು ವಾಚು ಮಾತ್ರ ದೋಶಪೂರಿತವಾಗಿರಬಹುದು. ಆಗ ಮಾತ್ರ ನಿಮಗೆ ಸಿಕ್ಸ್ ಸಿಗ್ಮಾ ಛಾಪು ಸಿಗುತ್ತದೆ. ಸಾಫ್ಟ್ ವೇರ್ ನ ಹತ್ತು ಲಕ್ಷ ಸಾಲಿನ 'ಕೋಡ್' ನಲ್ಲಿ ಹೆಚ್ಚೆಂದರೆ ಒಂದು ಸಾಲು ಮಾತ್ರ ದೋಷದಿಂದ ಕೂಡಿರಬಹುದು! ಅಗಸರವನು ಹತ್ತು ಲಕ್ಷ ಬಟ್ಟೆಗಳ ಪೈಕಿ ಒಂದು ಬಟ್ಟೇಯನ್ನು ಮಾತ್ರ ಕಳೆದು ಹಾಕಬಹುದು. ನಮ್ಮ ಡಬ್ಬಾವಾಲಾಗಳ ಡಬ್ಬಿ ಕೋಟಿಗೆ ಒಂದು ಬಾರಿ ಮಾತ್ರ ವ್ಯತ್ಯಾಸ ಬರುತ್ತದೆ. ಅವರ ಸೇವೆಯ ದಕ್ಷತೆಯ ಮುಂದೆ ಸಿಕ್ಸ್ ಸಿಗ್ಮಾ ಅಳತೆಗೋಲೇ ಚಿಕ್ಕದಾಗಿ ಹೋಯಿತು! ನಮ್ಮ ಹೋಟೆಲ್ ಮಾಣಿಗಳು, ಅಗಸರವನು ಯಾವ ಸಿಕ್ಸ್ ಸಿಗ್ಮಾಕ್ಕೂ ಕಡಿಮೆಯಿಲ್ಲ!
ದೊಡ್ಡ ದೊಡ್ಡ ಸಾಫ್ಟ್ ವೇರ್ ಕಂಪನಿಗಳು ಸಿಕ್ಸ್ ಸಿಗ್ಮಾ ಪಡೆಯಲು ಹೆಣಗುತ್ತವೆ. ಈ ಕಂಪನಿಗಳಲ್ಲಿ ಕೆಲಸ ಮಾಡುವವರು ಅತ್ಯಂತ ಬುದ್ಧಿವಂತರಾದ 'ಕ್ವಾಲಿಫೈಡ್' ಇಂಜಿನಿಯರುಗಳು, ಮ್ಯಾನೇಜ್ ಮೆಂಟ್ ಕುಳಗಳು! ಆದರೂ ನಮ್ಮ ದೇಶದಲ್ಲಿ ಸಿಕ್ಸ್ ಸಿಗ್ಮಾ ಪಡೆದ ಕಂಪನಿಗಳು ಕೆಲವೇ ಕೆಲವು ಅದೂ ಕೆಲವು ಪ್ರಾಜೆಕ್ಟ್ ಗಳಿಗೆ ಮಾತ್ರ! ನಮ್ಮ ಹೋಟೆಲ್ ತಮ್ಮಂದಿರು, ಅಗಸರು, ಡಬ್ಬವಾಲಾಗಳು, ಪೇಪರ್ ಹುಡುಗರು ಸಾಧಿಸಿರುವ ದಕ್ಷತೆಯನ್ನು ಸಾಧಿಸಲು ನಮ್ಮ ಮಹಾಬುದ್ಧಿವಂತ ಐ ಎ ಎಸ್ ಆಫೀಸರುಗಳು ಎಷ್ಟು ಸಮಯ ತೆಗೆದುಕೊಳ್ಳುತ್ತಾರೋ!

ಶುಕ್ರವಾರ, ಡಿಸೆಂಬರ್ 4, 2009

ಕವಿ ಸಂಭಾಷಣೆ


ಬೇಂದ್ರೆಯವರಿಂದ ಪ್ರಶಂಸೆ ಪಡೆಯುವುದೆಂದರೆ ಸುಲಭದ ಮಾತಲ್ಲ. ಕವಿಯಾಗಿ ಬೇಂದ್ರೆಯವರ ಒಳನೋಟಗಳೇ ವಿಭಿನ್ನವಾಗಿದ್ದವು. ಅನೇಕ ಕವಿತೆ ಕಾವ್ಯಗಳು ಅವರ ವಿಮರ್ಶೆಯಿಂದ ಬೇರೆಯದೇ ಆಯಾಮವನ್ನು ಹೊಂದುತ್ತಿದ್ದವು. ಅವರೊಡನೆ ಇಂತಹ ಪ್ರಶಂಸೆ ಪಡೆದ ಒಬ್ಬ ಕವಯಿತ್ರಿ ಬೆಳಗೆರೆ ಜಾನಕಮ್ಮನವರು. ಸಂಚಿ ಹೊನ್ನಮ್ಮ. ಹೆಳವನಕಟ್ಟೆ ಗಿರಿಯಮ್ಮ, ಅಕ್ಕಮ್ಮನಂತಹವರ ಸಾಲಿನಲ್ಲಿ ನಿಲ್ಲುವವರು.

ಜಾನಕಮ್ಮ ಬರೆದದ್ದು ಬಹಳ ಕಡಿಮೆ. ಆದರೂ ಅವರ ಹೆಸರು ಆಗಿನ ಅನೇಕ ಸಾಹಿತಿಗಳ ಬಾಯಲ್ಲಿ ನಲಿದಾಡುತ್ತಿತ್ತು. ಡಿವಿಜಿ, ಬೇಂದ್ರೆ, ಮಾಸ್ತಿ,ರಾಜರತ್ನಂ ರಂತವರು ಜಾನಕಮ್ಮನವರ ಅಭಿಮಾನಿ ಬಳಗದಲ್ಲಿದ್ದರು. ಬಳ್ಳಾರಿಗೆ ಹೋದಾಗಲೆಲ್ಲಾ ಸಾಹಿತಿಗಳೆಲ್ಲಾ ಜಾನಕಮ್ಮನ ಮನೆಗೆ ಭೇಟಿ ಕೊಡುತ್ತಿದ್ದರು.

ಈ ಕವಿಗಳದೇ ವಿಚಿತ್ರ ಲೋಕ. ಅವರು ಹೃದಯಗಳನ್ನು ಹೇಗೆ ಬೆಸೆದುಕೊಳ್ಳುತ್ತಾರೋ ಅವರೇ ಬಲ್ಲರು. ಅಂತಹ ಯೋಚನೆಗಳು ಅವರಿಗೆ ಅಂತರಾಳದಿಂದ ಆವಾಹನೆಯಾಗುವ ಪರಿ ಅವರಿಗೇ ತಿಳಿದುದು. ಜಾನಕಮ್ಮ ಮತ್ತು ಬೇಂದ್ರೆ ಒಬ್ಬರನ್ನೊಬ್ಬರು ನೋಡಿರಲಿಲ್ಲ. ಆದರೆ ಜಾನಕಮ್ಮನ ಸಾವಿಗೆ ಬೇಂದ್ರೆ ಸ್ವಂತ ಮಗಳನ್ನು ಕಳೆದುಕೊಂಡಂತೆ ದುಃಖಿಸಿದ್ದರು. ಸಂಪರ್ಕವೇ ಅತ್ಯಂತ ಕಷ್ಟವಾಗಿದ್ದ ಕಾಲದಲ್ಲಿ ಕವಿತೆಯೊಂದು ಈ ಹೃದಯಗಳನ್ನು ಬೆಸೆಯಿತು.

ಕವಿತೆಯ ರಚನೆಗಳನ್ನು ಮುಂದುವರಿಸಬೇಕೆ ಬೇಡವೇ ಎಂಬ ಯೋಚನೆಯಲ್ಲಿದ್ದ ಜಾನಕಮ್ಮ ತಂದೆಯ ಸಲಹೆಯಂತೆ ಬೇಂದ್ರೆಯವರಿಗೆ ಒಂದು ಕವನವನ್ನು ಬರೆದು ಕಳುಹಿಸಿದರು. ಬೇಂದ್ರೆಯವರಿಂದ ಉತ್ತರ ಬಂದರೆ ಮುಂದುವರಿಸುವುದು, ಇಲ್ಲದಿದ್ದರೆ ನಿಲ್ಲಿಸುವುದು ಎಂಬುದು ಅವರ ಯೋಚನೆ. ಅವರು ವರಕವಿಗೆ ಬರೆದ ಕವನ ಹೀಗಿತ್ತು.



ದೋಷರಾಹಿತ್ಯದ ಕಲ್ಪನಾ ರಾಜ್ಯದಲ್ಲಿ

ಸಗ್ಗದೂಟವನುಣುವ ಪಿರಿಯ ಕಬ್ಬಿಗನೇ

ನಿನ್ನ ಕಾಣಲು ಬಯಸಿ ಹಲವಾರು ದಿನಗಳಿಂದ

ಇಣುಕಿಣುಕಿ ನೋಡುತಿದೆ ಈ ಸಣ್ಣ ಮನವು

ಕವಿಯ ಬರಹವ ಕಂಡು ರಸ ಬಿಂದುಗಳ ಸವಿಗೆ

ಸುಳಿಯುತಿದೆ ಭೃಂಗದೊಡಲು ಭಾವಪರಿಯದೆಯೇ

ಜಡಾ ಮನಕೆ ಚೇತನವ ಕಲ್ಪಿಸುವ ಮಾನ್ಯ

ತೇಲಿ ಬಿಡು ಆ ನಿನ್ನ ಭಾವಗಳನ್ನೊಮ್ಮೆ.



ನಾಲ್ಕನೆಯ ದಿನವೇ ಈ ಪತ್ರಕ್ಕೆ ಬೇಂದ್ರೆಯವರಿಂದ ಉತ್ತರ ಬಂದಿತು.



ತಂಗಿ ಜಾನಕೀ ನಿನ್ನ ವೈದೇಹನೊಲವಿನಲಿ

ಓಲೆ ಬಂದಿತು ಇತ್ತ ತೇಲಿ

ಆರಿಗಾರೋ ಎನ್ನುವ ನಾಸ್ತಿಕತೆಯನು ನೂಕಿ

ದಾಟಿ ದಿಕ್ ಕಾಲಗಳ ಸುತ್ತು ಬೇಲಿ

ಕವಿಯು ಮಾನಸ ಪುತ್ರ ಅವನು ಆಗಸದೇಹಿ

ಮಾತಿನಲಿ ಮೂಡುವ ಭಾವ ಜೀವಿ

ಮೈಯಾಚೆ ಉಸಿರಾಚೆ ಬಗೆಯ ಬಣ್ಣಗಳಾಚೆ

ಅವನ ಹೂವು ಅರಳುವುದು ಭಾವದೇವಿ



ಬೇಂದ್ರೆಯವರ ಕವನ ಕುಸುರಿ, ಚಾತುರ್ಯವನ್ನು ನಾವು ಗಮನಿಸಬೇಕು. ಅದೆಂತಹ ಅಮೋಘ ಒಳನೋಟ. ಬೇಂದ್ರೆಗೆ ಬೇಂದ್ರೆಯೇ ಸಮ!

’ವೈದೇಹನೊಲವಿನಲಿ’ ಎಂಬ ಪದ ಗಮನಿಸಿ. ವೈದೇಹಿ ಎಂದರೆ ಸೀತೆ. ಜಾನಕಿ ಎಂದರೂ ಸೀತೆ. ಮಗದೊಂದು ಅರ್ಥ ಬರುವಂತೆ ಇಲ್ಲಿ ಪದಗಳೊಡನೆ ಆಟವಾಡಿದ್ದಾರೆ ಬೇಂದ್ರೆ! ವೈದೇಹನೊಲವು ಅಂದರೆ ವೈ-ದೇಹ ’ದೇಹ ಸಂಬಂಧವಿಲ್ಲದ’ ಒಲವು! ಯಾಕೆಂದರೆ ಅವರಿಬ್ಬರೂ ಪರಸ್ಪರರನ್ನು ನೋಡಿಯೇ ಇಲ್ಲ! ಆದರೂ ಅವರಿಬ್ಬರ ನಡುವೆ ಬೆಸುಗೆ! ಮೂರನೆಯ ಮತ್ತು ನಾಲ್ಕನೆಯ ಸಾಲಿನಲ್ಲಿ ಇನ್ನೊಂದು ಸೂಕ್ಷ್ಮವನ್ನು ವ್ಯಕ್ತ ಪಡಿಸಿದ್ದಾರೆ. ಆಗಿನ ಕಾಲದಲ್ಲಿ ಅಂದರೆ ತೀರಾ ಮಡಿವಂತಿಕೆಯಿದ್ದ ಕಾಲದಲ್ಲಿ ಒಬ್ಬ ಹೆಣ್ಣುಮಗಳು ಬೇರೆ ಗಂಡಸಿನೊಡನೆ ಮಾತನಾಡಾಲೂ ಅಸಾಧ್ಯವೆಂಬಂತಿತ್ತು. ಅಂತಹದರಲ್ಲಿ ಪತ್ರ ಬರೆದಿದ್ದಾರೆ ಜಾನಕಮ್ಮ! ಹಾಗಾಗಿ ಸಮಾಜ ಹಾಕಿದ ಬೇಲಿಯನ್ನು ದಾಟಿದ್ದಾರೆ! ಆದರೇನಂತೆ? ಕವಿಗೆ ಬೇಲಿ ಎಂಬುದು ಎಲ್ಲಿದೆ? ಬಾನಿನಂತೆ ಅವನಿಗೆ ಎಲ್ಲೆ ಇಲ್ಲ, ಬಂಧನಗಳಿಲ್ಲ, ಏಕೆಂದರೆ ಅವನು ಭಾವಜೀವಿ!!!! ಇದು ಕಡೆಯ ನಾಲ್ಕು ಸಾಲುಗಳ ಭಾವ. ಈ ಕವನ ಹೀಗೆ ಮುಕ್ತಾಯವಾಗುತ್ತದೆ.



ಅದನು ನೀ ಕಂಡವಳು ಬೇರೆ ಕಾಣಿಕೆ ಏಕೆ

ಕ್ಷೀರ ಸಾಗರದಲೆಯ ತಲೆಯ ಪೆರೆಯೆ

ಪೂರ್ಣಿಮಾ ದೃಷ್ಟಿಯಲಿ ತೆರೆದಂದು ಸೃಷ್ಟಿಯಲಿ

ನಿನ್ನ ನಂದನಕೇನು ಮುಚ್ಚು ಮರೆಯೇ?



ಈ ಸಾಲುಗಳನ್ನು ಬಣ್ಣಿಸಿ ರಸಭಂಗ ಮಾಡಲಾರೆ. ಅವುಗಳನ್ನು ಹಾಗೆಯೇ ಅನುಭವಿಸಬೇಕು!



ಖ್ಯಾತ ಲೇಖಕಿ ನೇಮಿಚಂದ್ರ ಅವರ ಸಂಪಾದಕತ್ವದಲ್ಲಿ "ಬೆಳಗೆರೆ ಜಾನಕಮ್ಮ-ಬದುಕು ಬರಹ" ಪುಸ್ತಕ ಪ್ರಕಟವಾಗಿದೆ.ಸಧ್ಯಕ್ಕೆಇ-ರೂಪದಲ್ಲಿ ಇಲ್ಲಿ ಲಭ್ಯವಿದೆ. ಇವರ ಕವನ ಸಂಕಲನವನ್ನು ಮತ್ತೊಮ್ಮೆ ಪ್ರಕಟಿಸುವ ಇರಾದೆಯನ್ನು ಕೆಲ ಗೆಳೆಯರು ವ್ಯಕ್ತಪಡಿಸಿದ್ದಾರೆ. ನನಗಂತೂ ಅವರ ಕವನಗಳು ಹುಚ್ಚು ಹಿಡಿಸಿವೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಇಹಲೋಕದ ಪ್ರಯಾಣ ಮುಗಿಸಿದ ಜಾನಕಮ್ಮನ ಜೀವನ ದೃಷ್ಟಿಕೋನ, ಚಿಂತನೆ, ವಿಚಾರ ಲಹರಿ, ಸೃಜನಶೀಲತೆ ಅಮೋಘ ಎನ್ನಿಸುತ್ತವೆ. ಇವರ ಕವಿತೆಗಳ ಬಗ್ಗೆ ಮತ್ತು ಜೀವನದ ಬಗ್ಗೆ ಒಮ್ಮೆ ಬರೆಯುತ್ತೇನೆ! ಅಂದಹಾಗೆ ಜಾನಕಮ್ಮ ಓದಿದ್ದು ಒಂದನೆಯ ತರಗತಿಯವರೆಗೆ ಮಾತ್ರ!



ಒಂದು ಸ್ಯಾಂಪಲ್ ನಿಮಗಾಗಿ!



ಗುಬ್ಬಿ ಗುಬ್ಬಿ ತರವಲ್ಲ

ಮನೆಯಿದು ನನ್ನದು ನಿನದಲ್ಲ !

ಕಿಚಿ ಕಿಚಿ ಎಂದು ಕರೆಯದೆ ಇಲ್ಲಿ

ಬಯಲಿದೆ ಹೊರಗಡೆ ಸಾಯಲ್ಲಿ.!!



ಮೇಲುನೋಟಕ್ಕೆ ಇದು ಗುಬ್ಬಿಯನ್ನು ಓಡಿಸಲು ಬರೆದ ಕವನ. ಗುಬ್ಬಿ ಎಂದರೆ ಅರಿಷಡ್ವರ್ಗ, ಅಹಂ, ಸ್ವಾರ್ಥ ಇತ್ಯಾದಿ ’ವಿಷಯ’ಗಳು, ಮನೆ ಅಂದರೆ ನಮ್ಮ ಮನಸ್ಸು ಆಗಬಹುದು. ಮನಕ್ಕೆ ತೊಂದರೆ ಕೊಟ್ಟು ಶಾಂತಿಯನ್ನೆ ಕದಡದೇ ಬಯಲಲಿ ಹೋಗಿ ಸಾಯಿ ಎಂದು ವಿಷಯಂಗಳಿಗೆ ಹೇಳುತ್ತಿದ್ದಾರೆ ಜಾನಕಮ್ಮ. ಬಯಲು ಎಂದರೆ ಅರಿವು, ಸಾಕ್ಷಾತ್ಕಾರ ಎಂಬ ಅರ್ಥದಲ್ಲೂ ಬಳಸಲಾಗುತ್ತದೆ. ಈ ಪ್ರಕಾರ "ಗುಬ್ಬಿ ಬಯಲಲ್ಲಿ ಹೋಗಿ ಸಾಯಿ!" ಎಂದರೆ ಏನಂತ ಅರ್ಥವಾಯಿತಲ್ಲ!!!!