ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಗುರುವಾರ, ಮೇ 22, 2008

ಸೃಜನ ಶೀಲತೆ ಯಾರೊಬ್ಬನ ಸೊತ್ತು ಅಲ್ಲ

ಹಡಗಲಿಯ ಉಷಾರಾಣಿಯವರ ಈ ಕವನ ಒಂದು ವರ್ಷ ಹಳೆಯ ಕಸ್ತೂರಿ ಓದುವಾಗ ಅಕಸ್ಮಾತಾಗಿ ಕಣ್ಣಿಗೆ ಬಿತ್ತು.

ಹಾರಲು ಬಯಸುವ ಮನವನ್ನು ಕಟ್ಟಿ ಹಾಕುವ ಸಂಪ್ರದಾಯಗಳನ್ನು ಖಂಡಿಸುವ

ಸೂಕ್ಷ್ಮ ಕೊನೆಯ ಸಾಲಿನಲ್ಲಿ ಅಡಗಿದೆ.

ಖುಲ್ಲಂ ಖುಲ್ಲ ತೆರೆದಿದೆ ಬಾಗಿಲು

ಅಪ್ಪಣೆ ಕೊಟ್ಟರೆ ಬೇಕಾದಲ್ಲಿಗೆ ಹಾರುವ

ಕುದುರೆ ಎದುರಿಗಿದೆ

ಆದರೇನು ಮೊಳೆ ಹೊಡೆದ ಹೊಸ್ತಿಲು

ಕಾಲುಗಳನ್ನು ಕಟ್ಟಿ ಹಾಕಿದೆ.


ಹಟ್ಸಾಫ್ ಸೋದರಿ ....

ಬುಧವಾರ, ಮೇ 21, 2008

ಕಂಪ್ಲಿ ಸಣ್ಣ ಹನುಮಂತ ಅವರು ಕೆಲ ವರ್ಷಗಳ ಹಿಂದೆ ವಿಜಯಕರ್ನಾಟಕದಲ್ಲಿ ಬರೆದ ಹನಿಗವನ ಹೀಗಿದೆ.

ಜನರೆನ್ನುವಂತೆ ನನ್ನ ಮನಸ್ಸು ಕಬ್ಬಿಣ ಎಂದು ಗೊತ್ತಾದದ್ದು

ಆಯಸ್ಕಾಂತದಂತೆ ನಿನ್ನ ಕಣ್ಣುಗಳನ್ನು ಸೆಳೆದಾಗಲೇ !!


ಇದರ ಆಳವನ್ನು ವಿವರಿಸಲು ಶಬ್ದಗಳನ್ನು ಬಳಸುವ ಅಗತ್ಯವಿಲ್ಲ ಎಂದು ನನಗೆ ತೋರುತ್ತದೆ. ಕಬ್ಬಿಣಕ್ಕೆ ಹೋಲಿಸಲಾದ ಮನಸ್ಸು ಅದನ್ನು ಸೆಳೆದ ಆಯಸ್ಕಾಂತ ನನ್ನನ್ನು ಹನುಮಂತರ ಅಭಿಮಾನಿಯನ್ನಾಗಿ ಮಾಡಿಬಿಟ್ಟಿತು !

ಬುಧವಾರ, ಮೇ 14, 2008

ನನ್ನ ಬ್ಲಾಗಮಂಡಲದ ಬಗ್ಗೆ ...

ಬ್ಲಾಗುವುದುಹೊಚ್ಚ ಹೊಸ ಹುಚ್ಚು. ಅಂತರ್ಜಾಲದ ಮೂಲಕ ಯೋಚನೆಗಳನ್ನು ಇನ್ನೊಬ್ಬರಿಗೆ ಮುಟ್ಟಿಸಬಲ್ಲ ಈ ನವನವೀನ ಸರಳ ಸಾಧನದ ಮುಂದೆ ನಾನೂ ತಲೆಬಾ(ಬ್ಲಾ)ಗಲೆಬೇಕಾಯಿತು. ಅನುಭವಜನ್ಯವಾದ, ವಿಚಾರ ವೇದ್ಯವಾದ ಅನೇಕ ವಿಷಯಗಳನ್ನು, ಮನಸ್ಸು ಯಾವುದೋ ಲಹರಿಯಲ್ಲಿ ಓಡುವಾಗ ತಡೆ ಒಡ್ಡಿದ ಅನೇಕ ಯೋಚನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ಇಲ್ಲಿ ಬ್ಲಾಗುತ್ತಿದ್ದೇನೆ. ಯಾವುದೋ ಒಂಟಿತನದಲ್ಲಿ ಕಾಡಿದ, ದೀರ್ಘ ಪ್ರಯಾಣಗಳ ನಡುವೆ ಓರೆಹಚ್ಚಿದ, ಪುಸ್ತಕಗಳನ್ನು ಓದುವಾಗ ಎದೆಯಲ್ಲಿ ಅದುರಿದ ಕೆಲವು ಚಿಂತನೆಗಳನ್ನು ಸ(ಮ)ಹೃದಯಿಗರೊಡನೆ ಹಂಚಿಕೊಳ್ಳುವ ಬಯಕೆ ನನ್ನದು. ನಿಮ್ಮ ಸಲಹೆ, ಸೂಚನೆ, ಟೀಕೆಗಳಿಗೆ ಸದಾ ಆದರದ ಸ್ವಾಗತ. ನಿಮ್ಮ ಅಮೂಲ್ಯ ಸಮಯದ ಕೆಲ ನಿಮಿಷಗಳನ್ನು ಇದಕ್ಕಾಗಿ ವ್ಯಯಿಸಿದರೆ ನಿಮಗೆ ನಾನು ಸದಾ ಋಣಿ.

ಬಾಬರಿ ದಂಗೆಯ ದಿನಗಳು !!!

ದಾವಣಗೆರೆಯ ಹೆಸರು ಇಲ್ಲಿಯವರೆಗೆ ೩ ಬಾರಿ ಬಿಬಿಸಿ ಯಲ್ಲಿ ಬಂದಿದೆ. ಮೊದಲನೆಯ ಸಾರಿ ೧೯೯೧ ರ ಬಾಬ್ರಿ ಮಸೀದಿಯ ದಂಗೆಗಳಾದಾಗ , ಎರಡನೆಯ ಬಾರಿ ದೇವರಬೇಳಕೆರೆ ಡ್ಯಾಮ್ ನಲ್ಲಿ ಬಸ್ ಉರುಳಿ ೮೦ ಜನ ಇಹ ಲೋಕ ತ್ಯಜಿಸಿದಾಗ ಮತ್ತು ಮೂರನೆಯದಾಗಿ ಕರಿಯ ಎಂಬ ಹುಡುಗ ಬೋರ್ ವೆಲ್ ನಲ್ಲಿ ಬಿದ್ದು ಪ್ರಾಣ ಕಳೆದುಕೊಂಡಾಗ. ಮೂರೂ ದುರಂತಗಳೇ
ಬಾಬ್ರಿ ಮಸೀದಿಯ ದಂಗೆಗಳು ನಡೆದಾಗ ನಾನು ನಾಲ್ಕನೆಯ ಇಯತ್ತೆಯಲ್ಲಿ ಓದುತ್ತಿದ್ದೆ. ಅಕ್ಟೋಬರ್ ನ ದಸರಾ ರಜೆಯ ಸಮಯ. ಎಲ್ಲರೂ ಇಂದು ರಾತ್ರಿ ಹಿಂದೂ ಮುಸ್ಲಿಂ ಗಲಾಟೆ ಎಂದು ಮಾತಾಡಿ ಕೊಳ್ಳುತಿದ್ದರು. ಎಲ್ಲರೂ ಅಂದುಕೊಂಡಂತೆ ಅಂದು ರಾತ್ರಿ ಗಲಾಟೆ ಶುರು ಆಗಿಯೇ ಹೋಯಿತು. ಮರುದಿನ ಬೆಳಿಗ್ಗೆ ಹಾಲು ತರಲು ಹೋದ ಪಕ್ಕದ ಮನೆಯ ಮೇಸ್ಟ್ರು ಪೊಲೀಸರ ಬೆತ್ತದ ರುಚಿ ಕಂಡು ಬಂದಿದ್ದರು. ಮೇಷ್ಟ್ರಿಗೆ ಪೋಲೀಸರು ಹೊಡೆದರಂತೆ ಎಂದು ಎಲ್ಲರು ಮಾತಾಡಿ ಕೊಳ್ಳುತ್ತಿದ್ದರು. ಆಗೆಲ್ಲ ಪತ್ರಿಕೆಗಳಲ್ಲಿ ಟಿವಿಗಳಲ್ಲಿ ಅಡ್ವಾಣಿ ಮಿಂಚುತ್ತಿದ್ದರು. ರಾಮಜನ್ಮ ಭೂಮಿ ಎಂಬ ಮಂತ್ರ ತಾರಕಕ್ಕೆರಿತ್ತು . ಎಲ್ಲೆಲ್ಲೂ ಅಯೋಧ್ಯೆಯದೆ ಮಾತು. ನನಗೆ ಈ ಗಲಾಟೆಯ ಹಿಂದಿನ ಐತಿಹಾಸಿಕ ಕಾರಣಗಳಾಗಲಿ , ರಾಜಕೀಯ ಕಾರಣಗಳಾಗಲಿ ಗೊತ್ತಿರಲಿಲ್ಲ. ಯಾವನೋ ಒಬ್ಬ ರಾಮನ ಗುಡಿಯನ್ನು ಕೆಡವಿಸಿ ಅಲ್ಲಿ ಮಸಿದಿಯನ್ನು ಕಟ್ಟಿಸಿದನಂತೆ.....ಈಗ ಅದನ್ನು ಒಡೆದು ಮತ್ತೆ ರಾಮ ಮಂದಿರವನ್ನು ಕಟ್ಟುತ್ತಾರಂತೆ ಎಂದು ನನ್ನ ಜೊತೆಯ ಹುಡುಗನೊಬ್ಬ ಕ್ವಚಿತ್ತಾಗಿ ಹೇಳಿದ್ದ. ರಾಮ ಮಂದಿರವನ್ನು ಕೆಡವಿ ಮಸೀದಿಯನ್ನು ಕಟ್ಟಿದವನ ದುಸ್ಸಾಹಸದ ಬಗ್ಗೆ ನನಗೆ ಅಸಾಧ್ಯ ಸಿಟ್ಟು ಬಂದಿತ್ತು. ಆದರೆ ಮಸೀದಿಯನ್ನು ಕಟ್ಟಿದ್ದು ೧೫ ನೆಯ ಶತಮಾನದಲ್ಲಿ ಎಂದು ತಿಳಿದಾಗ ರಾಮಮಂದಿರವನ್ನು ಕಟ್ಟುವವರ ಬಗ್ಗೆಯೇ ಜಿಗುಪ್ಸೆ ಬಂದಿತ್ತು. ಮನೆಯಲ್ಲೇ ಬಂಧಿಯಾಗಿರಬೇಕು, ಹೊರಗೆ ಆಡಲು ಹೋಗುವ ಹೋಗುವ ಹಾಗೂ ಇಲ್ಲ , ಶಾಲೆಗೆ ಹೋಗುವ ಹಾಗೂ ಇಲ್ಲ. (ನಾನು ಆಗ ಶಾಲೆಯನ್ನು ಪ್ರೀತಿಸುತ್ತಿದ್ದೆ !!!) ಯಾವುದೋ ಕಾಲದ ಜಗಳವನ್ನು ಕಾಲು ಕೆದರಿ ಮತ್ತೆ ತೆಗೆಯುವ ಇದೆಂಥ ತರಲೆ ಈ ಅದ್ವಾನಿಯದು ಎಂದೆನಿಸಿತ್ತು
ಒಂದು ದಿನ ನನಗೆ ಚೆನ್ನಾಗಿ ನೆನಪಿದೆ. ಮನೆ ಮಹಡಿಯ ಮೇಲೆ ಹತ್ತಿ ನಾನು, ಗೆಳೆಯರು ಅಕ್ಕ ಪಕ್ಕದ ಮನೆಯ ಹಿರಿಯರೆಲ್ಲ ಮುಖ್ಯರಸ್ತೆಯ ಮೇಲೆ ಸಾಗಬೇಕಿದ್ದ ರಾಮನ ಮೆರವಣಿಗೆಯನ್ನು ನೋಡಲು ಕಾತುರರಾಗಿ ನಿಂತಿದ್ದೆವು. ವೈಭವದ ಮೆರವಣಿಗೆ ಹಾಗು ಜನಸಾಗರದ ನಡುವೆ ರಾಮನ ರಥ ತುಂಬುಗಾಂಭೀರ್ಯದಿಂದ ಸಾಗಿ ಬರುತ್ತಿತ್ತು. ಮನೆಯ ಸರಿಯಾಗಿ ಎದುರಿಗೆ ಬರುತ್ತಿದ್ದಂತೆ ಅದೇನಾಯಿತೋ ಇದ್ದಕ್ಕಿದ್ದಂತೆ ಬೊಂಬು, ಗಳಗಳನ್ನು ಹಿಡಿದ ಗುಂಪೊಂದು ಇದ್ದಕ್ಕಿದ್ದಂತೆ ಮುಸಲ್ಮಾನರ ಒಣಿಯತ್ತ ಓಡ ತೊಡಗಿತು. ಅದೇ ರೀತಿ ಇನ್ನೊಂದು ಗುಂಪು ಮೆರವಣಿಗೆಯ ಮೇಲೆ ಮುಗಿಬಿತ್ತು. ಎರಡು ಬಾರಿ ಎವೆಯಿಕ್ಕಿ ತೆರೆಯುವುದರೊಳಗೆ ಅನೇಕ ಜನ ಬೋರಲು ಬಿದ್ದಿದ್ದರು. ಕೆಲವರು ಬೃಹತ್ತಾದ ಚರಂಡಿಯೊಳಗೆ ಬಿದ್ದಿದ್ದರು. ಹಿಂದೂ ಮುಸ್ಲಿಂ ಗಲಾಟೆ ಎಂದರೆ ಎಂಥದೋ ಕೊಳಿಜಗಳ ಇರಬೇಕು ಎಂಬ ಕಲ್ಪನೆಯಲ್ಲಿದ್ದ ನಂಗೆ ಜಗಳದ ಈ ಭಯಾನಕ ರೂಪ ತೀವ್ರವಾಗಿ ದಿಗಿಲಿಕ್ಕಿಸಿ ಬಿಟ್ಟಿತ್ತು. ಎರಡು ದಿನ ರಸ್ತೆಗಳಲ್ಲಿ ಚರಂಡಿಗಳಲ್ಲಿ ಹೆಣವಾಗಿ ಬಿದ್ದಿದ್ದವರೇ ಯೋಚನೆಗಳಲ್ಲಿ ಬರುತ್ತಿದ್ದರು. ಅದೆಷ್ಟು ಹೊತ್ತು ಆ ಗಲಾಟೆ ನಡೆಯಿತೋ ! ತಿರುಗಿ ಹಲವು ದಿನ ನಮ್ಮ ಓಣಿಯಲ್ಲಿ ಯಾರು ಮನೆಯಿಂದ ಹೊರಬೀಳಲಿಲ್ಲ. ಕರ್ಫ್ಯೂ ಜಾರಿಯಾಗಿತ್ತು . ಬೀದಿಗಳಲ್ಲಿ ಪೊಲೀಸರ ಬೂಟಿನ ಸದ್ದು ಬಿಟ್ಟರೆ ನಾಯಿಗಳು ಬೊಗಳುವ ಸದ್ದು ಕೇಳುತ್ತಿತ್ತು. ಅಗಾಗೊಮ್ಮೆ ಜೀಪೊಂದರಲ್ಲಿ ಕಂಡಲ್ಲಿ ಗುಂಡು ಎಂದು ಕೂಗುತ್ತ ಪೋಲೀಸರು ಓಡಾಡುತ್ತಿದ್ದರು . ಬೆನ್ನಟ್ಟಿ ಬರುವ ನಾಯಿಗಳನ್ನು ಗದರಿಸುತ್ತಿದ್ದ ಪೋಲೀಸರು ಅಗಾಗ ಕೆಲವರ ಮನೆಯಲ್ಲಿ ನೀರನ್ನು ಕೇಳಿ ಪಡೆಯುತ್ತಿದ್ದರು. ಕಸ ಚೆಲ್ಲಲು ಇಲ್ಲವೇ ಕುತೂಹಲದಿಂದ ಹೊರಬರುತ್ತಿದ್ದ ಹೆಂಗಳೆಯರನ್ನು ಪೋಲೀಸರು ಗದರಿಸಿ ಒಳ ಕಳುಹಿಸುತ್ತಿದ್ದರು. ಕರ್ಫ್ಯೂ ದಿನಗಳಲ್ಲಿ ತರಕಾರಿ ಹಾಗಿರಲಿ ಕುಡಿಯಲು ನೀರನ್ನೂ ಚೌಕಾಸಿ ಮಾಡಿ ಬಳಸಬೇಕಾಗುತ್ತಿತ್ತು.
ಕೆಲ ದಿನಗಳಲ್ಲಿ ವಾತಾವರಣ ತಿಳಿಯಾಗತೊಡಗಿತು. ಭಯಾನಕ ಸುದ್ದಿಗಳು ಕಿವಿಗೆ ಬೀಳತೊದಗಿದವು. ಪರಿಚಯದವರ ಅಂಗಡಿ ಗಳು ಸುಟ್ಟ , ಪೊಲೀಸರ ದೌರ್ಜನ್ಯದ ವರದಿಗಳು ಭಯ ಹುಟ್ಟಿಸುತ್ತಿದ್ದವು . ಅದರಲ್ಲೂ ಪೋಲೀಸರು ಹೊಡೆದ ಗುಂಡು ಒಬ್ಬನ ಸೊಂಟಕ್ಕೆ ತಗುಲಿ ಇನ್ನೊಂದು ಕಡೆಯಿಂದ ಹೊರಸಿಡಿದದ್ದನ್ನು ರಂಜಿತವಾಗಿ ವರ್ಣಿಸುತ್ತಿದರು. ನಮ್ಮ ಶಾಲೆಗಳ ದಸರಾ ರಜವನ್ನು ೧೫ ದಿನಗಳ ಕಾಲ ವಿಸ್ತರಿಸಲಾಗಿತ್ತು. ನನಗೆ ನೆನಪಿರುವ ಮಟ್ಟಿಗೆ ಗಲಾಟೆ ೩ ಹಂತಗಳಲ್ಲಿ ನಡೆಯಿತು. ಮೊದಲನೆಯ ಹಂತದ ಗಲಾಟೆಯ ನಂತರ ನಾವೆಲ್ಲ ರಾಣೆಬೆನ್ನುರಿಗೆ ರಜೆ ಕಳೆಯಲು ತೆರಳಿದೆವು. ಈ ಸಮಯ ದಲ್ಲೇ ಬಾಬ್ರಿ ಮಸೀದಿಯ ಧ್ವಂಸ ನಡೆದದ್ದು. ಸ್ಟಾರ್ ಟಿವಿ ಯಲ್ಲಿ ಬಾಬ್ರಿ ಮಸೀದಿಯ ಧ್ವಂಸ ವನ್ನು ಹಿರಿಯರೊಡನೆ ಕೂತು ನಾನೂ ನೋಡಿದೆ. ಇದೇ ಸಮಯದಲ್ಲೇ ನಾನು ಬಿಬಿಸಿ ಯಲ್ಲಿ ದಾವಣಗೆರೆಯನ್ನು ನೋಡಿದ್ದು ! ನಿಜಕ್ಕೂ ರಕ್ತದಲ್ಲಿ ತೊಯ್ದು ಹೋಗಿತ್ತು ನನ್ನ ಪ್ರೀತಿಯ ಊರು ! ನಾನು ದಿನಾ ಸಂಚರಿಸುತ್ತಿದ್ದ ಜಾಗೆಗಳಲ್ಲೇ ತೀವ್ರತರವಾದ ಹಿಂಸೆ ಗಳಾಗಿದ್ದವು. ನನ್ನ ಶಾಲೆಯ ರಸ್ತೆಯಲ್ಲಿ ಪೋಲೀಸರು ಗಸ್ತು ತಿರುಗುತ್ತಿದ್ದರು ! ಹಾಗೆ ನೋಡಿದರೆ ೧೯೯೧ ನಮ್ಮ ದೇಶಕ್ಕೆ ಐತಿಹಾಸಿಕ ಮಹತ್ವವುಳ್ಳ ವರ್ಷ. ಬಾಬ್ರಿ ಪ್ರಕರಣ ರಾಜೀವ್ ಗಾಂಧೀ ಹತ್ಯೆಗಳಿಗಾಗಿ ಅಲ್ಲ . ಇದೇ ವರ್ಷ ನಮ್ಮ ದೇಶ ಜಾಗತಿಕರಣವನ್ನು ಒಪ್ಪಿಕೊಂಡದ್ದು ! ಗ್ಯಾಟ್ ಒಪ್ಪಂದದ ವಿರುದ್ದ ಬರುತ್ತಿದ್ದ ಲೇಖನಗಳು , ವ್ಯಂಗ್ಯಚಿತ್ರಗಳು ನಿಂತು ಹೋಗಿ ಮಾಧ್ಯಮಗಳ ಲಕ್ಷ್ಯ ದಂಗೆಗಳ ಕಡೆಗೆ ತಿರುಗಿತು. ನಿಜ ಹೇಳಬೇಕೆಂದರೆ ಆಗ ಎಲ್ಲರು ಬೀದಿಗೆ ಇಳಿಯಬೇಕಾಗಿದ್ದುದು ಗ್ಯಾಟ್ ನ ವಿರುದ್ದ ! ರಾಜೀವ್ ಹತ್ಯೆ , ಮತೀಯ ದಂಗೆಗಳ ಮಧ್ಯೆ ದೇಶದ ಅರ್ಥವ್ಯವಸ್ಥೆಗೆ ಹೊಸ ಭಾಷ್ಯ ಬರೆದ ಈ ಐತಿಹಾಸಿಕ ಒಪ್ಪಂದ ಮುಸುಕಾಗಿ ಹೋಯಿತು. ಇಡೀ ವಿಶ್ವ ನಮ್ಮನ್ನು ಮುಕ್ಕಿ ಹರಿದು ತಿನ್ನಲು ಸಿದ್ಧವಾಗುತಿದ್ದಾಗ ನಾವು ಕಿತ್ತಾಡಿಕೊಂಡು ದೇಶದ ಆಂತರ್ಯವನ್ನು ಛಿದ್ರ ಗೊಳಿಸುತ್ತಿದ್ದೆವು. ಕಡೆಗೂ ನಾವು ಇತಿಹಾಸದಿಂದ ಪಾಠ ಕಲಿಯಲಿಲ್ಲ. ೧೦ ನೆಯ ಶತಮಾನದಲ್ಲಿ ಗಜ್ನಿ , ೧೬ ನೆಯ ಶತಮಾನದಲ್ಲಿ ಬ್ರಿಟಿಷರು ಬಂದಾಗಲು ನಾವು ಹೀಗೆಯೆ ಹೊಡೆದಾಡುತ್ತಿದ್ದೆವು !