ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಬುಧವಾರ, ಮೇ 14, 2008

ಕೆಲ ದಿನಗಳಲ್ಲಿ ವಾತಾವರಣ ತಿಳಿಯಾಗತೊಡಗಿತು. ಭಯಾನಕ ಸುದ್ದಿಗಳು ಕಿವಿಗೆ ಬೀಳತೊದಗಿದವು. ಪರಿಚಯದವರ ಅಂಗಡಿ ಗಳು ಸುಟ್ಟ , ಪೊಲೀಸರ ದೌರ್ಜನ್ಯದ ವರದಿಗಳು ಭಯ ಹುಟ್ಟಿಸುತ್ತಿದ್ದವು . ಅದರಲ್ಲೂ ಪೋಲೀಸರು ಹೊಡೆದ ಗುಂಡು ಒಬ್ಬನ ಸೊಂಟಕ್ಕೆ ತಗುಲಿ ಇನ್ನೊಂದು ಕಡೆಯಿಂದ ಹೊರಸಿಡಿದದ್ದನ್ನು ರಂಜಿತವಾಗಿ ವರ್ಣಿಸುತ್ತಿದರು. ನಮ್ಮ ಶಾಲೆಗಳ ದಸರಾ ರಜವನ್ನು ೧೫ ದಿನಗಳ ಕಾಲ ವಿಸ್ತರಿಸಲಾಗಿತ್ತು. ನನಗೆ ನೆನಪಿರುವ ಮಟ್ಟಿಗೆ ಗಲಾಟೆ ೩ ಹಂತಗಳಲ್ಲಿ ನಡೆಯಿತು. ಮೊದಲನೆಯ ಹಂತದ ಗಲಾಟೆಯ ನಂತರ ನಾವೆಲ್ಲ ರಾಣೆಬೆನ್ನುರಿಗೆ ರಜೆ ಕಳೆಯಲು ತೆರಳಿದೆವು. ಈ ಸಮಯ ದಲ್ಲೇ ಬಾಬ್ರಿ ಮಸೀದಿಯ ಧ್ವಂಸ ನಡೆದದ್ದು. ಸ್ಟಾರ್ ಟಿವಿ ಯಲ್ಲಿ ಬಾಬ್ರಿ ಮಸೀದಿಯ ಧ್ವಂಸ ವನ್ನು ಹಿರಿಯರೊಡನೆ ಕೂತು ನಾನೂ ನೋಡಿದೆ. ಇದೇ ಸಮಯದಲ್ಲೇ ನಾನು ಬಿಬಿಸಿ ಯಲ್ಲಿ ದಾವಣಗೆರೆಯನ್ನು ನೋಡಿದ್ದು ! ನಿಜಕ್ಕೂ ರಕ್ತದಲ್ಲಿ ತೊಯ್ದು ಹೋಗಿತ್ತು ನನ್ನ ಪ್ರೀತಿಯ ಊರು ! ನಾನು ದಿನಾ ಸಂಚರಿಸುತ್ತಿದ್ದ ಜಾಗೆಗಳಲ್ಲೇ ತೀವ್ರತರವಾದ ಹಿಂಸೆ ಗಳಾಗಿದ್ದವು. ನನ್ನ ಶಾಲೆಯ ರಸ್ತೆಯಲ್ಲಿ ಪೋಲೀಸರು ಗಸ್ತು ತಿರುಗುತ್ತಿದ್ದರು ! ಹಾಗೆ ನೋಡಿದರೆ ೧೯೯೧ ನಮ್ಮ ದೇಶಕ್ಕೆ ಐತಿಹಾಸಿಕ ಮಹತ್ವವುಳ್ಳ ವರ್ಷ. ಬಾಬ್ರಿ ಪ್ರಕರಣ ರಾಜೀವ್ ಗಾಂಧೀ ಹತ್ಯೆಗಳಿಗಾಗಿ ಅಲ್ಲ . ಇದೇ ವರ್ಷ ನಮ್ಮ ದೇಶ ಜಾಗತಿಕರಣವನ್ನು ಒಪ್ಪಿಕೊಂಡದ್ದು ! ಗ್ಯಾಟ್ ಒಪ್ಪಂದದ ವಿರುದ್ದ ಬರುತ್ತಿದ್ದ ಲೇಖನಗಳು , ವ್ಯಂಗ್ಯಚಿತ್ರಗಳು ನಿಂತು ಹೋಗಿ ಮಾಧ್ಯಮಗಳ ಲಕ್ಷ್ಯ ದಂಗೆಗಳ ಕಡೆಗೆ ತಿರುಗಿತು. ನಿಜ ಹೇಳಬೇಕೆಂದರೆ ಆಗ ಎಲ್ಲರು ಬೀದಿಗೆ ಇಳಿಯಬೇಕಾಗಿದ್ದುದು ಗ್ಯಾಟ್ ನ ವಿರುದ್ದ ! ರಾಜೀವ್ ಹತ್ಯೆ , ಮತೀಯ ದಂಗೆಗಳ ಮಧ್ಯೆ ದೇಶದ ಅರ್ಥವ್ಯವಸ್ಥೆಗೆ ಹೊಸ ಭಾಷ್ಯ ಬರೆದ ಈ ಐತಿಹಾಸಿಕ ಒಪ್ಪಂದ ಮುಸುಕಾಗಿ ಹೋಯಿತು. ಇಡೀ ವಿಶ್ವ ನಮ್ಮನ್ನು ಮುಕ್ಕಿ ಹರಿದು ತಿನ್ನಲು ಸಿದ್ಧವಾಗುತಿದ್ದಾಗ ನಾವು ಕಿತ್ತಾಡಿಕೊಂಡು ದೇಶದ ಆಂತರ್ಯವನ್ನು ಛಿದ್ರ ಗೊಳಿಸುತ್ತಿದ್ದೆವು. ಕಡೆಗೂ ನಾವು ಇತಿಹಾಸದಿಂದ ಪಾಠ ಕಲಿಯಲಿಲ್ಲ. ೧೦ ನೆಯ ಶತಮಾನದಲ್ಲಿ ಗಜ್ನಿ , ೧೬ ನೆಯ ಶತಮಾನದಲ್ಲಿ ಬ್ರಿಟಿಷರು ಬಂದಾಗಲು ನಾವು ಹೀಗೆಯೆ ಹೊಡೆದಾಡುತ್ತಿದ್ದೆವು !

ಕಾಮೆಂಟ್‌ಗಳಿಲ್ಲ: