ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಗುರುವಾರ, ನವೆಂಬರ್ 26, 2009

ಟೀಚರ್‍ ಎಂಬ ದೇವರುಗಳು.

ಬಾಲವಾಡಿ (ಈಗ ಎಲ್.ಕೆ.ಜಿ, ಯುಕೆಜಿ ಅಂತಾರೆ), ಒಂದನೆಯ ತರಗತಿಯ ಮಕ್ಕಳಿಗೆ ತಮ್ಮ ಶಿಕ್ಷಕರಿಗಿಂತ ಹೆಚ್ಚಿನದು ಯಾವುದೂ ಕಾಣುವುದಿಲ್ಲ. ಟೀಚರುಗಳ ವಾಕ್ಯವೇ ವೇದವಾಕ್ಯ. ಮಿಸ್ಸು ಹಾಕಿದ ಗೆರೆಯನ್ನು ಯಾವ ಕಾರಣಕ್ಕೂ ದಾಟರು. ಅಪ್ಪ ಅಮ್ಮನ ಮಾತಿಗಿಂತ ಟೀಚರುಗಳ ಮಾತಿಗೆ ಬೆಲೆ ಜಾಸ್ತಿ.
ನಾನೂ ಹೊರತಲ್ಲ. ನಮ್ಮ ಮಿಸ್ ಹೆಸರು ಮಂಗಳಾ ಮಿಸ್. (ಈಗ ಮೇಡಮ್ ಎಂದು ಕರೆಯುತ್ತೇನೆ!). ನನ್ನ ಬಗ್ಗೆ ಬಹಳ ಪ್ರೀತಿ! ಈಗಲೂ ನನ್ನ ಬಗ್ಗೆ ಅಕ್ಕರೆ. ಅವರಷ್ಟೇ ಅಲ್ಲ. ನನ್ನ ಎಲ್ಲ ಗುರುವರ್ಗದವರೂ ಅಷ್ಟೇ. ನಮ್ಮ ಅಪ್ಪ ಅಮ್ಮ ಸಿಕ್ಕಾಗಲೆಲ್ಲ ನಾನು ಮತ್ತು ತಂಗಿ ಏನು ಮಾಡುತ್ತಿದ್ದೇವೆ ಎಂದು ಪ್ರಗತಿಯನ್ನು ಕೇಳಿ ತಿಳಿದುಕೊಂಡು ಸಂತಸಗೊಳ್ಳುತ್ತಾರೆ.
ಮೊದಲನೆಯ ತರಗತಿಯಲ್ಲಿದ್ದಾಗ ನಡೆದದ್ದಿದು. ಆಗಾಗ ತರಗತಿಗಳಿಗೆ ಪೆನ್ನುಗಳನ್ನೋ, ಪುಸ್ತಕಗಳನ್ನೋ, ಮ್ಯಾಪುಗಳನ್ನೋ ಮಾರಲು ತರಗತಿಗಳಿಗೆ ಕೆಲವರು ಬರುತ್ತಿದ್ದರು. ಒಮ್ಮೆ ಮ್ಯಾಜಿಕ್ ಸ್ಲೇಟಿನವನು ಬಂದ. ಆ ಸ್ಲೇಟಿನ ಮೇಲೆ ಮಸಿ ಬಳಸದೇ ಬರೆಯಬಹುದುತ್ತು. ಪೆನ್ನಿನ ಹಿಂಬಾಗದಿಂದ ಬರೆಯಬಹುದಿತ್ತು. ಬರೆದ ಪುಟವನ್ನು ಹಿಂಬದಿಯ ಕಪ್ಪು ಭಾಗದಿಂದ ಬೇರ್ಪಡಿಸಿದರೆ ಬರೆದದ್ದು ಅಳಿಸಿ ಹೋಗುತ್ತಿತ್ತು. ನನಗೆ ಇದು ಆಕರ್ಷಕವಾಗಿ ಕಂಡರೂ ಕೊಂಡುಕೊಳ್ಳಲೇಬೆಕೆಂದು ಅನಿಸಲಿಲ್ಲ. ಸೇಲ್ಸಹುಡುಗ "ನೀವೊಮ್ಮೆ ಹೇಳಿ ಮೇಡಮ್" ಅಂತ ಮಂಗಳಾ ಮಿಸ್ಸಿಗೆ ಕೇಳಿದ.
"ನಾಳೆ ನಿಮ್ಮ ಅಪ್ಪ ಅಮ್ಮನ್ನ ಕೇಳಿ ಸ್ಲೇಟನ್ನು ಕೊಂಡುಕೊಳ್ಳಿ" ಎಂದು ಮಿಸ್ಸು ಹೇಳಿದರು.
ಅಲ್ಲಿಂದ ನನಗೆ ತುಡಿತ ಶುರುವಾಯಿತು! ಮನೆಗೆ ಹೋಗಿ ಮಿಸ್ಸು ಹೇಳಿದ್ದಾರೆ ಆ ಸ್ಲೇಟು ಬೇಕೇ ಬೇಕು ಅಂತ ರಚ್ಚೆ ಹಿಡಿದೆ. ನಾನು ಅಂಥ ಹಟಮಾರಿಯಲ್ಲ. ಆದರೆ ಅವತ್ತು ರಚ್ಚೆ ಹಿಡಿದೆ ಯಾಕೆಂದರೆ ಮಿಸ್ಸು ಹೇಳಿದ್ದರಲ್ಲ!
ಮರುದಿನ ಅಮ್ಮ ಶಾಲೆಗೆ ಬಂದರು. "ಇವಾ ನೋಡ್ರಿ, ಅದ್ಯಾದೋ ಮ್ಯಾಜಿಕ ಸ್ಲೇಟ್ ಬೇಕು ಅಂತ ಹಠ ಮಾಡತಾನ" ಅಂತ ದೂರಿದರು. ಮಂಗಳಾ ಮಿಸ್ಸು "ಯಾಕೋ ಸ್ಲೇಟ್ ಬೇಕು ಅಂತ ಹಟ ಮಾಡ್ತೀಯಾ?" ಅಂತ ಕಿವಿ ಹಿಂಡಿದರು! ನನಗೆ ಅವತ್ತು ಕಿವಿ ಹಿಂಡಿದ್ದಕ್ಕಿಂತ ಹೆಚ್ಚಿನ ಆಘಾತವಾದದ್ದು ಮಂಗಳಾ ಮಿಸ್ಸು ಪ್ಲೇಠ್ ತಿರುವಿ ಹಾಕಿದ್ದರಿಂದ. ನಿನ್ನೆ ತಾನೇ ಸ್ಲೇಟ್ ಕೊಂಡುಕೊಳ್ಳಿ ಎಂದವರು ಇವತ್ತು ಕಿವಿ ಹಿಂಡಿಬಿಡುವುದೇ? ಅವರು ಹೇಳಿದ್ದಕ್ಕೆ ತಾನೇ ನಾನು ಹಟ ಹಿಡಿದದ್ದು! ಮಂಗಳಾ ಮಿಸ್ಸು ನನಗೆ ಈ ಮೂಲಕ ದ್ರೋಹ ಬಗೆದರು ಎಂದೇ ಅಂದುಕೊಂಡೆ. ಅನೇಕ ದಿನಗಳವರೆಗೆ ಮಿಸ್ಸಿನ ಮೇಲೆ ಸಿಟ್ಟಿತ್ತು. ಮನಿಸಿಕೊಂಡೇ ಅಡ್ಡಾಡಿದ್ದಾಯಿತು! ಆಮೇಲೆ ಹಾಗೆಯೇ ರಮಿಸಿ ಕರಗಿಸಿದರೆನ್ನಿ!
ಇಲ್ಲಿ ತಪ್ಪು ಯಾರೆಂದು ತಿಳಿಯುತ್ತಿಲ್ಲ. ಸಹಜವಾಗಿ ’ಕೊಂಡುಕೊಳ್ಳಿ’ ಎಂದು ಹೇಳಿದ ಮಿಸ್ಸಿನದೋ? ಸಹಜವಾಗಿ ಹೇಳಿದ್ದನ್ನು ಸಿರಿಯಸ್ ಆಗಿ ತೆಗೆದುಕೊಂಡ ನನ್ನದೋ? ದೂರು ಹೇಳಿ ಮಿಸ್ಸು ಮತ್ತು ನನ್ನ ನಡುವೆ ತಂದಿಟ್ಟ ಅಮ್ಮನದೋ!

ಸೋಮವಾರ, ನವೆಂಬರ್ 23, 2009

ಎಲ್ಲಾ ಪ್ರಚಾರವೂ ಒಳ್ಳೆಯದೇ!

" Any Publicity is good publicity" ಅಂತಾರೆ. ನಮ್ಮ ಹೆಸರನ್ನು ನಾವೇ ಹೇಳುವುದಕ್ಕಿಂತ ಇನ್ನೊಬ್ಬರು ಹೇಳಿದಾಗ ಹೆಚ್ಚು ಸಂತಸವಾಗುತ್ತದೆ.
ನನ್ನ ಅನಿಸಿಕೆಯನ್ನು ಖಂಡಿಸಿ ಪ್ರಿನ್ಸಟನ್ ವಿವಿಯ ಶಾಂತಾರಾಮ್ ವಿಜಯಕರ್ನಾಟಕದಲ್ಲಿ ಬರೆದಿದ್ದಾರೆ. ಇಷ್ಟು ಸಂತೋಷ ನನ್ನ ಲೇಖನ ಪ್ರಕಟ ಆದಾಗಲೂ ಆಗಿರಲಿಲ್ಲ!
ಶಾಂತಾರಾಂ ಅವರನ್ನು ಅವರ ನಿವೇಶದಲ್ಲೇ ತಿಂಗಳ ಹಿಂದೆ ನನನ್ನ ಸ್ನೇಹಿತರೊಂದಿಗೆ ಭೇಟಿಯಾಗಿದ್ದೆ. ಅವತ್ತು ಸಾಹಸಸಿಂಹ ವಿಷ್ಣುವರ್ಧನ ಜನುಮದಿನ.
"ನಾನೂ ಚಾಮರಾಜಪೇಟೆಯಲ್ಲಿ ಓದಿದವನು. ನಾನೂ ನಿಮ್ಮ ಸಾಹಸಸಿಂಹ ಕ್ಲಾಸ್ ಮೇಟುಗಳು. ಸಂಪತ ಕುಮಾರ ಅಂತ ಅವನ ಹೆಸರು. ಕಡೆಗೆ
ಓದು ಮುಗಿದ ಮೇಲೆ ಇಲ್ಲಿ ಬದುಕಲು ಜಾಗವಿಲ್ಲದೇ ಹೊಟ್ಟೆಪಾಡಿಗಾಗಿ ಅಮೇರಿಕೆಗೆ ತೆರಳಿದೆ" ಎಂದು ಮಾತಿಗಾರಂಭಿಸಿದರು.
ತಾತ್ವಿಕವಾಗಿ ನಾವು ವಿರೋಧಿಗಳಾದರೂ ವಯಕ್ತಿಕಮಟ್ಟದಲ್ಲಿ ಅವರ ತೋರಿದ ಸ್ನೇಹ ನನಗಿಷ್ಟವಾಯಿತು! ಮೊದಲು ಬಿಯರಗಾಗಿ ಆಹ್ವಾನಸಿದವರು ನಮಗೆ ಅಭ್ಯಾಸವಿಲ್ಲವೆಂದು ತಿಳಿದು
ಕಾಫಿಯಿಂದ ಆದರಿಸಿದರು.
ಪ್ರಸ್ತುತ ಲೇಖನ ಎರಡು ಮೂರು ತಿಂಗಳ ಹಿಂದೆಯೇ ಪ್ರಕಟವಾಗಬೇಕಿತ್ತು. ಭಟ್ಟರು ಈಗ ಕೃಪೆತೋರಿದರೆನಿಸುತ್ತದೆ! ಈ ಲೇಖನದ ಬಗ್ಗೆ ಹೇಳಿ ನಿಮ್ಮನ್ನು ಖಂಡಿಸಿದ್ದೇನೆ, ವ್ಯಂಗ್ಯವಾಡಿದ್ದೇನೆ ಎಂದರು. ಆದರೆ ಈ ಲೇಖನದಲ್ಲಿ ಒಂದು ಕಡೆ ಮಾತ್ರ ನನ್ನ ಹೆಸರನ್ನು ಉಲ್ಲೇಖಿಸಿದ್ದಾರೆ.ಅದೂ ಜೆಫರಿ ಬಗ್ಗೆ ಹೇಳುವಾಗ. ನನ್ನೆದುರಿಗಿನ ಮಾತಿಗೂ ಲೇಖನಕ್ಕೂ ಸಂಪೂರ್ಣ ಸಾಮ್ಯಗಳಿವೆ. ಸೆರಾಲಿನಿ, ಜೆಫರಿ, ವಂದನಾಶಿವ, ನಾಗೇಶ ಹೆಗಡೆ ಇವರೆಲ್ಲ ಕಳ್ಳರು; ಇವರಿಗೇನು ತಿಳಿದಿದೆ ಎಂದು ಹಂಗಿಸಿದರು. ಬಿಟಿ ಹತ್ತಿಯ ಬಗ್ಗೆ ಅಧ್ಯಯನ ನಡೆಸಿದ ಝಕಾರಿಯಾ ಮತ್ತಿತರರ ಸಂಶೋಧನೆಯನ್ನು ಅಲ್ಲಗಳೆದು ಅವರೆಲ್ಲ ಯಾವುದೋ ಭ್ರಮೆಗೊಳಗಾಗಿದ್ದಾರೆ ಎಂದು ಜರಿದರು. ನಾನು ಗಮನಿಸಿದ ಒಂದು ಅಂಶವೆಂದರೆ ಇವರ ಪ್ರಕಾರ ಬಿಟಿ ಬಗ್ಗೆ ಮಾತಾಡಲು ಪಿಎಚ್.ಡಿ ಇದ್ದವರಿಗೆ ಮಾತ್ರ ಹಕ್ಕು ಇದೆ! ಕಣ್ಣೆದುರಿಗೆ ಕಂಡ ಸತ್ಯವನ್ನು ಹೇಳಿದರೂ ಅದು ಪಿಎಚ್.ಡಿ ಹೊಂದಿದವನು ಹೇಳಿದರೆ ಮಾತ್ರ ಸತ್ಯ! ಡಾಕ್ಟರೇಟ ಗಳನ್ನು ಬಿಟ್ಟು ಬೇರೆಯವರು ಬಿಟಿ ಬಗ್ಗೆ ಮಾತನಾಡಲು ಅರ್ಹರಲ್ಲ!
ಇನ್ನು Horizontal gene transfer ಎಂಬ ಮಾತೇ ಸುಳ್ಳು. gene transfer, ಪ್ರಕೃತಿಯಲ್ಲಿ ಲಕ್ಷಾಂತರ ವರ್ಷಗಳಿಂದ ನಡೆಯುತ್ತಿದೆ ಎಂಬ ವಾದ ಮುಂದಿಟ್ಟರು. ಅದೇನೋ ದಿಟ ಆದರೆ ಅಕ್ಕಿಯಿಂದ ಅಕ್ಕಿಗೆ ಜೋಳದಿಂದ ಜೋಳಕ್ಕೆ ಅಂದರೆ ಒಂದೇ ತಳಿಯ ಸಸ್ಯಗಳ ನಡುವೆ gene transfer ಆಗಿವೆಯೇ ಹೊರತು ಇವರು ಮಾಡಿರುವಂತೆ ಣಿಗಳ,ಬ್ಯಾಕ್ಟೀರಿಯಾಗಳ ನಡುವೆ ಮತ್ತು ಸಸ್ಯಗಳ ನಡುವೆ gene transfer ಆಗಿಲ್ಲ! ರಸಾಯನಿಕ ಗೊಬ್ಬರಗಳಿಂದ ಯಾವ ಹಾನಿಯೂ ಇಲ್ಲ. ಅದಕ್ಕೆ ನಮ್ಮ ಶರೀರ ಹೊಂದಿಕೊಳ್ಳುತ್ತದೆ ಎಂದು ನಮ್ಮ ಕಿವಿಯ ಮೇಲೆ ಹೂವಿಡಲು ನೋಡಿದರು. ಶರೀರ ಹೊಂದಿಕೊಳ್ಳುತ್ತದೆ ಎಂಬುದು ನಿಜ, ಹೊಂದಿಕೊಳ್ಳಲು ಹತ್ತಾರು ತಲೆಮಾರುಗಳು ಹೋಗಬೆಕು. ಅಷ್ಟರಲ್ಲಿ ಮನುಕುಲಕ್ಕೆ ಆಗಬಬೇಕಾದ ಹಾನಿ ಆಗಿಹೋಗಿರುತ್ತದೆ!
ಸುಮಾರು ಎರಡು ತಾಸುಗಳ ಕಾಲ ನಡೆದ ಸಂಭಾಷಣೆಯನ್ನು ಇಲ್ಲಿಡುವುದು ಕಷ್ಟ. ಕನಿಷ್ಟ ಸಾಮಾನ್ಯ ಜ್ಞಾನ ಇರುವ ಯಾರಿಗಾದರೂ ಮೇಲಿನ ಅಂಶಗಳು ಅರ್ಥವಾಗುತ್ತವೆ. ಇದಕ್ಕೆ ಸಾಕ್ಷಿ ಬೇರೆ ಬೇಕು ಅಂತ ಕೇಳುತ್ತಾರೆ. ಹಾಳಾಗಿ ಹೋಗಲಿ ಎಂದು ಸಾಕ್ಷಿಗಳನ್ನು ಮುಂದಿಟ್ಟರೂ ಒಪ್ಪಲು ಕೆಲ ಮೂರ್ಖರು ತಯಾರಿರುವುದಿಲ್ಲ. ಅಮೇರಿಕ ಎಂದರೆ ಸಾಚಾತನದ ಪಳೆಯುಳಿಕೆ ಎಂಬಂತೆ ವರ್ತಿಸುವ ವಿತಂಡರಿಗೆ ಏನು ಹೇಳಲಾದೀತು?

ಬುಧವಾರ, ನವೆಂಬರ್ 11, 2009

ಭೂರಮೆಯು ಬಸಿರಾಗಿ

ಭೂರಮೆಯನು ಆ ಬಾನು
ಸರಸಾಟಕೆ ತಾ ಕರೆವ.
ಭೋರ್ಗರಿಸಿ ಆರ್ಭಟಿಸಿ
ಪ್ರೀತಿಯ ಸೋನೆಯಗರೆವ.

ಭೂದೇವಿ ನಾಚಿ ಕೆಂಪಾಗಿ
ನದಿತೊರೆಗಳಲಿ ಮೇಲುಕ್ಕಿ
ಮಳೆರಾಯನ ರೇತದಲಿ
ಇಳೆಯೊಡಲು ಬಸಿರಾಗಿ

ಎಲ್ಲೆಲ್ಲೂ ಹಸಿರುಕ್ಕಿ
ಭೂಮಕ್ಕಳ ಪಾಲಿಸಿ ಫಲಿಸಿ
ಜೀವಕೆ ಕಳೆ ಮುತ್ತಿಕ್ಕಿ
ಜಗದೊಳಗೆ ಸಂಚಯವಾಗಿ

ಬುಧವಾರ, ಆಗಸ್ಟ್ 26, 2009

'ಮೊಕ್ಷಕೆರಡಕ್ಷರ' ಯಾವುದು ಗೊತ್ತಾ ?

ಅಕ್ಷರವು ಲೇಖಕ್ಕೆ ತರ್ಕ ತಾ ವಾದಕ್ಕೆ

ಮಿಕ್ಕ ಓದುಗಳು ತಿರುಪೆಗೆ

ಮೊಕ್ಷಕೆರಡಕ್ಷರವೇ ಸಾಕು ಸರ್ವಜ್ಞ ;

ಪ್ರವಾಸಿ ಮಂದಿರದ ಗೋಡೆಯ ಮೇಲಿದ್ದ ವಚನ ಓದುತ್ತಿದ್ದೆ.
ನನಗಿಂತ ಎರಡು ವರ್ಷ ಕಿರಿಯ ಸಹೋದ್ಯೋಗಿ ಬಂದು "ಹರ್ಷಣ್ಣ 'ಮೊಕ್ಷಕೆರಡಕ್ಷರ' ಯಾವುದು ಹೇಳಿ ನೋಡೋಣ ?" ಅಂದ.
" ಇನ್ಯಾವುದು ' ಮೊ .ಕ್ಷ ' ಎರಡಕ್ಷರ ಆಯ್ತಲ್ಲಾ ?" ಅಂದೆ.

"ಅಲ್ಲ " ಅಂದ.
"ಯೋಗ ?"
"ಅಲ್ಲ "
" ಧ್ಯಾನ ?"
"ಅಲ್ಲ "
" ಸತ್ಯ?"
"ಅಲ್ಲ "
" ಜ್ಞಾನ ?"
"ಅಲ್ಲ "
" ಕರ್ಮ ?"
"ಅಲ್ಲ "
" ಭಕ್ತಿ ?"
"ಅಲ್ಲ "
" ತಪ ?"
"ಅಲ್ಲ "
" ವೇದ ?"
"ಅಲ್ಲ "
" ಶಿವ ?"
"ಅಲ್ಲ "
" ಕೃಷ್ಣ ?"
"ಅಲ್ಲ "
" ರಾಮ ?"
"ಅಲ್ಲ "
" ಗುರು ?"
"ಅಲ್ಲ "
" ಮಣ್ಣು ?"
"ಅಲ್ಲ "
" ದಾನ ?"
"ಅಲ್ಲ "
" ದಯೆ ?"
"ಅಲ್ಲ "
" ಮನ ?"
"ಅಲ್ಲ "
" ಪೂಜೆ ?"
"ಅಲ್ಲ "
" ಜಪ ?"
"ಅಲ್ಲ "
"ಗೊತ್ತಾಗಲಿಲ್ಲ ಹೇಳಪ್ಪ !"
"ಹಳೆ ಕಾಲದಲ್ಲಿ ಇದ್ದೀರಲ್ಲ ಹರ್ಷಣ್ಣ ! ಕಾಲದ ಜೊತೆ ಅಪಡೆಟ್ ಆಗ್ತಿರಬೇಕು !ಎರಡಕ್ಷರ ಯಾವ್ದು ಗೊತ್ತಾ? "
" ವಿಸ್ಕಿ, ರಮ್, ವೋಡ್ಕಾ, ಸ್ಕಾಚ್, ಬ್ರಾಂಡಿ, ವೈನ್, ನೀರಾ, ಬೀಡಿ, ಗಾಂಜಾ..ಹ್ಹೆ...ಹ್ಹೆ...ಹ್ಹೆ.... ಎಲ್ಲಾ ಎರಡಕ್ಷರ ! "
"ಇದ್ರಿಂದ ಮೋಕ್ಷ ಸಿಗೋದು ನಮಗಲ್ಲಪ್ಪಾ ಬಾಟಲಿಗಳಿಗೆ! ಬಾಟಲಿಯೋಳಗಿನ 'ಮತ್ತು' ಖಾಲಿಯಾಗುತ್ತದೆ . ನಿನಗೆ ಮೋಕ್ಷ ಸಿಗಬೇಕು ಅಂದ್ರೆ ನಿನ್ನೊಳಗಿನ 'ಮತ್ತು' ಖಾಲಿಯಾಗಬೇಕು!"

ಸೋಮವಾರ, ಆಗಸ್ಟ್ 10, 2009

ಅದನ್ನೂ ದೇವರು ಎಂದು ಕರೆದುಬಿಟ್ಟರೆ ????

ರೇಲ್ವೇ ಸ್ಟೇಷನ್ನಿನಲ್ಲಿ ಹಿರಿಯ ವಿಜ್ಞಾನ ಲೇಖಕ ಎಮ್.ಆರ್. ನಾಗರಾಜ್ ಸಿಕ್ಕಿದ್ದರು. ಹೋಗಿ "ನಮಸ್ತೆ ಸರ್" ಎಂದು ಮಾತನಾಡಿಸಿದೆ.
ಅವರಿಗೆ ತಕ್ಷಣ ಗುರುತಾದಂತೆ ಕಾಣಲಿಲ್ಲ. "ಎಲ್ಲಿ ಸಿಕ್ಕಿದ್ದೆವು ಅಂತ ನೆನಪಾಗಲಿಲ್ಲ" ಎಂದರು.
"ಎರಡು ವರ್ಷದ ಹಿಂದೆ ಕೂಡಲಸಂಗಮದಲ್ಲಿ ವಿಜ್ಞಾನ ಲೇಖಕರ ಶಿಬಿರದಲ್ಲಿ ಸರ್.. ಪದೇ ಪದೇ ದೇವರನ್ನು ಎಳೆತಂದು ಚರ್ಚೆಯ ದಾರಿ ತಪ್ಪಿಸುತ್ತಿದ್ದೆನಲ್ಲ..ನಾನೇ" ಎಂದೆ.
"ಓಹ್ ..ದಾವಣಗೆರೆಯವರಲ್ಲವೇ ನೀವು? ಸಂತೋಷ!" ಕುಶಲೋಪರಿ ಮುಂದೆ ಸಾಗಿತು. ನೆನಪು ಎರಡು ವರ್ಷಗಳ ಹಿಂದಕ್ಕೋಡಿತು.

ಈ ಸಮಾವೇಶದಲ್ಲಿ ನಾಸ್ತಿಕವಾದಕ್ಕೆ ವಿಶೇಷ ಮಹತ್ವವಿತ್ತು. ದೇವರನ್ನು ಹಿಗ್ಗಾಮುಗ್ಗಾ ಬೈಯುವುದು "ಹಿಡನ್ ಅಜೆಂಡಾ" ಗಳಲ್ಲೊಂದು ಎನ್ನಬಹುದು. ನನಗೆ ನಿರೀಶ್ವರವಾದಿಗಳನ್ನು, ಕಮ್ಯುನಿಷ್ಟರನ್ನು ಮಾತನಾಡಿಸಿ ಅಣಕಿಸುವುದರಲ್ಲಿ ಭಲೇ ಮಜಾ ಬರುತ್ತದೆ. ಇದಕ್ಕಾಗಿಯೇ ಮೈಸೂರು, ಬೆಂಗಳೂರುಗಳಲ್ಲಿ ಎಸ್.ಯು.ಸಿ.ಐ ಕಚೇರಿಗಳಿಗೆ ಹೋಗಿದ್ದೇನೆ. ಬಸ್ ಸ್ಟಾಂಡ್ ಗಳಲ್ಲಿ ಡಬ್ಬಿ ಹಿಡಿದು ಹಣ ಕೇಳಲು ನಿಲ್ಲುವ ಹುಡುಗರನ್ನು ಮಾತನಾಡಿಸಿದ್ದೆನೆ. ಯಾವುದಾದರೂ ಮೇಳದಲ್ಲಿ ಇವರ ಮಳಿಗೆಯನ್ನು ಕಂಡರೆ ಅತ್ಯಂತ ಸಂಭ್ರಮದಿಂದ ಕಿಚಾಯಿಸಲು ಹೋಗುತ್ತೇನೆ. ಅವರ ಬಗೆಗಿನ ಜೋಕುಗಳನ್ನು ಹೇಳಿ ಅವರು ಸಿಟ್ಟಾಗಿ ಮುಖ ಕೆಂಪು ಮಾಡಿಕೊಳ್ಳುವುದನ್ನು ನೋಡುವುದೆಂದರೆ ನನಗೆ ಬಹಳ ಖುಷಿ.

ಈ ಶಿಬಿರದಲ್ಲಿದ್ದ ಅತ್ಯಂತ ಕಿರಿಯ ವಯಸ್ಸಿನ ಮತ್ತು ಅತ್ಯಂತ ಉದ್ಧಟ ಸದಸ್ಯ ನಾನು. ಬೇಕೆಂದೇ ಗೋಷ್ಟಿಗಳಿಗೆ ಹೋಗುವಾಗ ಹಣೆಗೆ ಢಾಳಾಗಿ ವಿಭೂತಿ ಬಳಿದುಕೊಂಡು ಹೋಗುತ್ತಿದ್ದೆ. ಸಮ್ಮೇಳನದ ಕಡೆಯ ದಿನ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಅತಿಥಿಗಳಾಗಿ ಆಗಮಿಸಿದ್ದರು. ಇವರು ನಿಜಕ್ಕೂ ಮೇಧಾವಿಗಳು. ಭೌತಶಾಸ್ತ್ರದ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಕನ್ನಡಕ್ಕೆ ಅನುವಾದಿಸಿದ್ದಾರೆ. ವೇದಿಕೆಯ ಮೇಲೆ ಮಾತನಾಡುತ್ತಾ "ವಿಜ್ಞಾನ ಎಂದರೆ ಜನರಿಗೆ ಸತ್ಯವನ್ನು ತೋರಿಸುವುದು. ವಿಜ್ಞಾನವೇ ಸತ್ಯ." ಎಂದರು.
ಪ್ರಶ್ನೋತ್ತರ ಕಾರ್ಯಕ್ರಮ ಮೊದಲಾಯಿತು. ಅನೇಕರು ಪ್ರಶ್ನೆಗಳನ್ನು ಕೇಳಿ ತಮ್ಮ ಜ್ಞಾನದಾಹವನ್ನು ತೃಪ್ತಿ ಪಡಿಸಿಕೊಂಡರು. ಕಡೆಗೆ ತಲೆಹರಟೆ ಮಾಡಲು ನಾನು ಎದ್ದೆ. ಚಿಕ್ಕ ಸಂಭಾಷಣೆ ನಡೆಯಿತು.
"ವಿಜ್ಞಾನವೇ ಸತ್ಯ ಎಂದಿರಲ್ಲ. ಹಾಗೆಂದರೇನು?"
"ವಿಜ್ಞಾನ ಜನರಲ್ಲಿನ ಅಜ್ಞಾನವನ್ನು ಹೋಗಲಾಡಿಸುತ್ತದೆ. ತಮ್ಮ ಸಂಶೊಧನೆಗಳಿಂದ ವಿಜ್ಞಾನಿಗಳು ಸತ್ಯವನ್ನು ಜನರಿಗೆ ತಿಳಿಸುತ್ತಾರೆ"
"ಭೊರ್ ಹೇಳಿದ್ದನ್ನೆ ರುದರ್ಫರ್ಡ್ ಅಲ್ಲಗಳೆದರು, ನ್ಯೂಟನ್ ಹೇಳ್ದಿದ್ದನ್ನ ಐಸೆನ್‍ಬರ್ಗ್ ಅಲ್ಲಗಳೆದರು. ಹಾಗಾದರೆ ಸತ್ಯ ಕಾಲಕಾಲಕ್ಕೆ ಬದಲಾಗುತ್ತಾ? ಕಾಲಕಾಲಕ್ಕೆ ಬದಲಾದರೆ ಅದನ್ನು ಸತ್ಯ ಎನ್ನಬಹುದಾ?"
"ಅದು ಹಾಗಲ್ಲ. ಆಯಾ ಸಮಯಕ್ಕೆ ಅದು ಸರಿಯಾದರೆ ಅದು ಸತ್ಯ. ವಿಜ್ಞಾನ ಸತ್ಯದ ಸಮೀಪಕ್ಕೆ ನಮ್ಮನ್ನು ಕರೆದೊಯ್ಯುತ್ತದೆ."
"ಹೇಗೆ? ಬೈನರಿ ಸರ್ಚ್ ಮಾಡಿದ ಹಾಗೆ ಸುಳ್ಳನ್ನು ನಿರಾಕರಿಸುತ್ತಾ ಹೋಗುವುದಾ? ಅಥವಾ ಹೊಸದನ್ನು ಹುಡುಕಿಕೊಂಡು ಹೋಗುವುದಾ?"
"ಎರಡೂ ಆಗಬಹುದು. ಉದಾಹರಣೆಗೆ ಈಗ ವಿಜ್ಞಾನಿಗಳು ಹೊಸ ಸಂಶೋಧನೆ ಕೈಗೊಂಡಿದ್ದಾರೆ. ಜಗತ್ತಿನ ಎಲ್ಲಾ ಶಕ್ತಿಗಳಿಗೂ ಒಂದೇ ಶಕ್ತಿಯೇ ಮೂಲವಾಗಿದೆ. ಅದೇ ಶಕ್ತಿಯೇ ಅಣುಶಕ್ತಿಯಲ್ಲಿರುವುದು. ಅದೇ ಶಕ್ತಿಯೇ ಬೆಳೆಯುವ ಹುಲ್ಲಿನಲ್ಲಿರುವುದು. ಬಹುತೇಕ ಯಶಸ್ವಿಯಾಗುವ ಹಂತಕ್ಕೆ ಬಂದಿದೆ ಅದು."
"ಅಕಸ್ಮಾತ್ ಬಿಲಿಯಾಂತರ ಹಣ ಖರ್ಚು ಮಾಡಿ ಕಂಡುಕೊಂಡ ಆ ಶಕ್ತಿಗೆ ವಿಜ್ಞಾನಿಗಳು ’ದೇವರು’ ಅಂತ ಹೆಸರಿಟ್ಟರೆ ಏನು ಮಾಡೋದು?" ಎಂದುಬಿಟ್ಟೆ.
ಮಾಜಿ ಉಪಕುಲಪತಿಗಳು ಇರಿಸುಮುರುಸುಗೊಂಡರು. ಅವರ ಮೊಗದ ಮೇಲೆ ಅಸಹನೆ ಸ್ಪಷ್ಟವಾಗಿ ಕಂಡಿತು.
ಪಕ್ಕದಲ್ಲೇ ಕುಳಿತಿದ್ದ ಸಭಾಧ್ಯಕ್ಷರು "ಒಳ್ಳೆಯ ಚರ್ಚೆ ನಡೆಯುತ್ತಿತ್ತು ನೀವು ಚರ್ಚೆಯ ಹಾದಿ ತಪ್ಪಿಸಿದಿರಿ" ಎಂದು ಸಿಡಿಮಿಡಿಗೊಂಡರು.
ನಾನು ವಿಜಯೋತ್ಸಾಹದಲ್ಲಿ ಕುರ್ಚಿಯ ಮೇಲೆ ಕುಳಿತೆ.
ನಂತರ ಅನೇಕರು ಬಂದು " ಅವರು ನಿಮಗೆ ಉತ್ತರ ಕೊಡಲಿಲ್ಲ ಅಲ್ಲವೇ? ಆ ಪ್ರಶ್ನೆಗೆ ಉತ್ತರ ಇದೆಯೇ ?" ಎಂದು ಕೇಳಿದರು. ನಿಜ ಹೇಳಬೇಕೆಂದರೆ ನನ್ನಲ್ಲೂ ಉತ್ತರ ಇರಲಿಲ್ಲ. ಆ ಕ್ಷಣದಲ್ಲಿ ನಾನು ಮೇಧಾವಿಗಳನ್ನು ತಬ್ಬಿಬ್ಬು ಮಾಡಿದೆ ಎಂಬ ಹೆಮ್ಮೆ ಇತ್ತಾದರೂ ನಂತರ ಅಂತಹ ಹಿರಿಯರ ಎದುರಿಗೆ ಅಷ್ಟು ಉದ್ಧಟತನದಿಂದ ವರ್ತಿಸಬಾರದಿತ್ತು ಎನಿಸಿತು.
ವಿಜ್ಞಾನಕ್ಕೆ ದೇವರು ನಿಲುಕುತ್ತದೆ ಎಂಬುದರ ಬಗ್ಗೆ ನನಗೆ ನಂಬಿಕೆ ಇಲ್ಲ. ಆದರೆ ನಾಸ್ತಿಕನಾಗಿದ್ದ ನನ್ನನ್ನು ದೇವರೆಡೆಗೆ ಹೊರಳಿಸಿದ್ದೇ ವಿಜ್ಞಾನ ಎಂಬುದಂತೂ ಸತ್ಯ. (ಇದರೆ ಬಗ್ಗೆ ಮತ್ತೆಂದಾದರೂ ಬರೆಯುತ್ತೇನೆ.)