ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಬುಧವಾರ, ಸೆಪ್ಟೆಂಬರ್ 29, 2010

ಸ್ವದೇಶಿ ತಂತ್ರಜ್ಞರ ಸಂಘಕ್ಕೆ ಸ್ವಾಗತ!


ರಾಮರಾಜ್ಯವಾಗಬೇಕಾದರೆ ಹಳ್ಳಿಗಳು ಆರ್ಥಿಕವಾಗಿ ಸಾಮಾಜಿಕವಾಗಿ ಆಡಳಿತಾತ್ಮಕವಾಗಿ ಸಶಕ್ತವಾಗಬೇಕು ಮತ್ತು ಸ್ವಾವಲಂಬಿಯಾಗಬೇಕು. ಮಹಾತ್ಮಾ ಗಾಂಧಿಜಿ ಹಿಂದ್ ಸ್ವರಾಜ್ ನಲ್ಲಿ ಹೇಳಿರುವ ದೇಶ ಕಟ್ಟಬೇಕಿರುವ ರೂಪುರೇಷೆಯನ್ನು ಪ್ರಾಯೋಗಿಕವಾಗಿ ಪ್ರಚುರಬಡಿಸಲು ಸತಂಸ ಮುಂದಾಗಿದೆ.



ಸ್ವತಂಸಂ ನ ಮೊದಲ ಗುರಿ ತಂತ್ರಜ್ಞಾನವನ್ನು ವಿಕೇಂದ್ರೀಕರಣಗೊಳಿಸಿವುದು. ಗ್ರಾಮೀಣ ಭಾಗದ ಜನರಿಗೆ ಹೊರೆಯಾಗದಂತೆ ಹೆಚ್ಚಿನ ವಿದ್ಯುತ್ ಮತ್ತು ಪರಿಸರಹಾನಿಯನ್ನು ಬೇಡದ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿ ಎಲ್ಲರ ಕೈಗೆಟಕುವಂತೆ ಮಾಡುವುದು. ರೈತರು ಬೆಳೆಯುವ ಕಚ್ಚಾ ಸರಕನ್ನು ಬಹುರಾಷ್ಟ್ರೀಯ ಕಂಪನಿಗಳು ಕಡಿಮೆ ಬೆಲೆಗೆ ಖರೀದಿಸಿ ಸಿದ್ಧವಸ್ತುಗಳನ್ನಾಗಿ ಮಾರ್ಪಡಿಸಿ ಹೆಚ್ಚಿನ ಬೆಲೆಗ ಮಾಡುತ್ತವೆ. ಇದರಿಂದ ದೇಶದ ಸಂಪತ್ತು ಕೊಳ್ಳೆಯಾಗುತ್ತಿರುವುದಲ್ಲದೇ ಜನಸಾಮಾನ್ಯರಿಗೂ ಹಣದುಬ್ಬರದ ಸಮಸ್ಯೆ ಕಾಡುತ್ತದೆ.



ರೈತರು ಕಂಪನಿಗಳಿಗೆ ಕಚ್ಚಾಸರಕನ್ನು ಕೊಡುವ ಬದಲು ತಾವೇ ಸಿದ್ಧ ಸರಕನ್ನು ತಯಾರು ಮಾಡಿಕೊಳ್ಳಬೇಕು. ಬೇಸಾಯದ ದಿನಗಳಲ್ಲಿ ಅಲ್ಲದೇ ಉಳಿದ ದಿನಗಳಲ್ಲಿಯೂ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಇದರಿಂದಾಗಿ ಧನಲಾಭ ಬಹುರಾಷ್ಟ್ರೀಯ ಕಂಪನಿಗಳಿಗೆ ಹೋಗುವ ಬದಲು ರೈತನಿಗೆ ಹೋಗುತ್ತದೆ. ಹಳ್ಳಿಗಳು ಹಣದ ಉತ್ಪಾದನೆಯ ಕೇಂದ್ರಗಳಾಗುತ್ತವೆ. ದೇಶದ ಆರ್ಥಿಕ ಚಟುವಟಿಕೆ ಹಳ್ಳಿಗಳಲ್ಲಿ ಕೇಂದ್ರೀಕೃತವಾಗುತ್ತದೆ. ಹಳ್ಳಿಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಹಳ್ಳಿಗಳು ಆರ್ಥಿಕವಾಗಿ ಸಶಕ್ತವಾಗುತ್ತವೆ.



ಹಳ್ಳಿಗಳಿಗೆ ಈ ರೀತಿ ಆರ್ಥಿಕ ಪ್ರಾಬಲ್ಯ ದೊರೆಯಲು ರೈತರಿಗೆ ತಂತ್ರಜ್ಞಾನ ಲಭ್ಯವಾಗಬೇಕು. ತಂತ್ರಜ್ಞಾನ ರೈತರಿಗೆ ಹೊರೆಯಾಗಬಾರದಲ್ಲದೇ ಪರಿಸರ ಸ್ನೇಹಿಯಾಗಿರಬೇಕು. ಈ ರೀತಿಯ ತಂತ್ರಜ್ಞಾನವನ್ನು ಅಭಿವೃದ್ಧಿ ಸ್ವತಂಸಂ ಶ್ರಮಿಸುತ್ತಿದೆ. ಕಚ್ಚಾವಸ್ತುಗಳನ್ನು ಸಿದ್ಧವಸ್ತುಗಳನ್ನಾಗಿ ಪರಿವರ್ತಿಸುವ ಚಿಕ್ಕ ಚಿಕ್ಕ ಯಂತ್ರಗಳನ್ನು ತಯಾರಿಸಿ ರೈತರಿಗೆ ಕಡಿಮೆ ಬೆಲೆಯಲ್ಲಿ ಕೊಡುವುದು ಸ್ವತಂಸಂ ಉದ್ದೇಶ.



ಚಿಕ್ಕ ಯಂತ್ರಗಳು ಹಳ್ಳಿಯ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದಲ್ಲದೇ ಸ್ಥಳೀಯವಾಗಿ ಮಾರುಕಟ್ಟೆಯನ್ನು ಸೃಷ್ಟಿಸಲು ಸಹಾಯಕವಾಗುತ್ತವೆ.



ಸ್ವತಂಸಂ ಪರವಾಗಿ ಸಮಾಜ ಸೇವೆಯಲ್ಲಿ ತೊಡಗಿರುವ/ತೊಡಗಲಿರುವ ಕೆಲ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ಯಂತ್ರಗಳ ಉದಾಹರಣೆ ಇಲ್ಲಿದೆ,



1. ೧. ಬಯೋಗ್ಯಾಸ್ ಆಧಾರಿತ ವಿದ್ಯುತ್ ಉತ್ಪಾದನೆ.
2. ೨. ಎಣ್ಣೆಯ ಗಾಣದಿಂದ ವಿದ್ಯುತ್ ಉತ್ಪಾದೆ (ಮೂರು ಕಿ.ವ್ಯಾ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯ)
3. ೩. ಮೂರು ಸಾವಿರ ರುಪಾಯಿ ವೆಚ್ಚದಲ್ಲಿ ಬಯೋಗ್ಯಾಸ್ ಪ್ಲಾಂಟ್. (ಎರಡು ಬುಟ್ಟಿ ಸಗಣಿಯಿಂದ ನಾಲ್ಕು ತಾಸು ಒಲೆ ಉರಿಸಬಹುದು)
4. ೪. ಮನುಷ್ಯ ಮತ್ತು ಪ್ರಾಣಿಗಳ ನಡಿಗೆಯ ಸಮಯದಲ್ಲಿ ಉಂಟಾಗುವ ಒತ್ತಡದಿಂದ ವಿದ್ಯುತ್ ಉತ್ಪಾದನೆ.
5. ೫. ಮೂರು ಅಡಿ ಎತ್ತರ ಎರಡು ಅಡಿ ಉದ್ದಗಲದ ಭತ್ತದಿಂದ ಅಕ್ಕಿ ತಯಾರಿಸುವ ಯಂತ್ರ. (ದಿನಕ್ಕೆ ಒಂದು ಟನ್ ಉತ್ಪಾದನೆಯ ಸಾಮರ್ಥ್ಯ)
6. ೬. ತೆಂಗಿನ ಎಣ್ಣೆ ತೆಗೆಯುವ ಯಂತ್ರ. (ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ನಲವತ್ತು ಲಕ್ಷ ರೂಪಾಯಿಗಳು. ನಾವು ತಯಾರಿಸಿರುವ ಅದೇ ಸಾಮರ್ಥ್ಯದ ಯಂತ್ರದ ಬೆಲೆ ಕೇವಲ ಇಪ್ಪತೈದು ಸಾವಿರ ರೂಪಾಯಿಗಳು. ನಮ್ಮ ಯಂತ್ರ ಕೇವಲ ಹತ್ತು ಅಡಿ X ಹತ್ತು ಅಡಿ ಜಾಗದಲ್ಲಿ ಕೂತರೆ ಅಂತರ‍್ರಾಷ್ಟ್ರೀಯ ಯಂತ್ರ ಅರವತ್ತು X ನಲವತ್ತು ಅಡಿಗಳಷ್ಟು ಜಾಗವನ್ನು ಕಬಳಿಸುತ್ತದೆ.)



ಸ್ವತಂಸಂ ನ ಸಮ್ಮೇಳನ ಬರುವ ಗಾಂಧಿ ಜಯಂತಿಯಂದು ಕುಂದಾಪುರ ಬಳಿಯ ಕುಂಭಾಸಿಯಲ್ಲಿ ನಡೆಯಲಿದೆ. ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಜೊತೆಗೆ ಲಗತ್ತಿಸಲಾಗಿದೆ. ಸಮ್ಮೇಳನಕ್ಕೆ ಎಲ್ಲರಿಗೂ ಆದರದ ಸ್ವಾಗತ.



ಸ್ವತಂಸಂ ನ ಬಾಗಿಲು ಸರ್ವರಿಗೂ ಒಳಿತನ್ನು ಬಯಸುವ ಎಲ್ಲ ಒಳ್ಳೆಯ ಮನಸ್ಸುಗಳಿಗೆ ತೆರೆದಿದೆ. ತಂತ್ರಜ್ಞರು ಉದ್ಯಮಿಗಳು ಹಾಗೂ ಸಹೃದಯಿಗಳು ಸ್ವತಂಸಂ ಗೆ ತಂತ್ರಜ್ಞಾನದ ಮೂಲಕ ಹೊಸ ಚಿಂತನೆಗಳ ಮೂಲಕ ಕೊಡುಗೆಯನ್ನು ಸಲ್ಲಿಸಬಹುದು. ನಮ್ಮೊಡನೆ ದೇಶದ ಒಳಿತಿಗಾಗಿ ಕೆಲಸ ಮಾಡಲು ಇಚ್ಛಿಸುವ ಎಲ್ಲರಿಗೂ ಆದರದ ಸ್ವಾಗತ.

1 ಕಾಮೆಂಟ್‌:

Sanjeev Hiremath ಹೇಳಿದರು...

Keep up the great work you are all doing. Capacity building is the key to building a sustainable society